ಯಾದಗಿರಿ: ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಿದ್ದು, ಸವಾರರು ಅಡ್ಡಾಡಿದ್ದಿ ವಾಹನ ಚಾಲನೆ ಮಾಡುವುದರಿಂದ ಸಂಚಾರ ದಟ್ಟಣೆ ಉಂಟಾಗಿ ಹಲವು ರೈಲು ಪ್ರಯಾಣಿಕರು ತೊಂದರೆ ಅನುಭವಿಸಿದರು.
ಬುಧವಾರ ರಾತ್ರಿ ಗಂಟೆ ವೇಳೆ ಉದ್ಯಾನ್ ಎಕ್ಸ್ಪ್ರೆಸ್ ರೈಲು ಬಂದಾಗ ರೈಲ್ವೆ ಸ್ಟೇಷನ್ನಿಂದ ಸುಮಾರು ಒಂದು ಕಿ.ಮೀವರೆಗೆ ಸಂಚಾರ ದಟ್ಟಣೆ ಉಂಟಾಗಿ ಪಾದಚಾರಿಗಳು ನಡೆದಾಡಲು ಕೂಡ ಪರದಾಡಿದರು.ಅಲ್ಲದೇ ಬೆಂಗಳೂರಿಗೆ ಹೋಗಬೇಕಿದ್ದ ಪ್ರಯಾಣಿಕರು ರೈಲು ಸಿಗದೇ ಹಿಡಿಶಾಪ ಹಾಕಿದರು.
ವಾಹನಗಳು ಅಡ್ಡಾದಿಡ್ಡಿಯಾಗಿ ರಸ್ತೆಯ ಮೇಲೆ ನಿಲ್ಲಿಸಿರುವುದು ಒಂದು ಕಾರಣವಾದರೆ, ಪರಸ್ಪರ ಎರಡು ದಿಕ್ಕಿನ ವಾಹನಗಳ ಸಂಚಾರದಿಂದ ಸಂಚಾರ ದಟ್ಟಣೆ ಉಂಟಾಯಿತು.
ಈ ಹಿಂದೆ ಬೆಳಿಗ್ಗೆ ಹಾಗೂ ಸಂಜೆ ವೇಳೆ ಸಂಚಾರ ಪೊಲೀಸರು ಈ ರಸ್ತೆಯ ಮೇಲೆ ಗಸ್ತು ತಿರುಗುತ್ತಿದ್ದರು. ಆದರೆ, ಈಗ ಪೊಲೀಸರು ಗಸ್ತು ತಿರುಗುವುದು ಬಿಟ್ಟಿರುವುದರಿಂದ ಪ್ರತಿದಿನ ಪಾದಚಾರಿಗಳು ಹಾಗೂ ಅವಸರದಲ್ಲಿ ರೈಲು ಪ್ರಯಾಣ ಮಾಡುವವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ರೈಲ್ವೆ ನಿಲ್ದಾಣ ಬಳಿ ಆಟೊ ನಿಲ್ದಾಣವಿದ್ದರೂ ಪ್ರಯಾಣಿಕರು ತೆರಳುವ ಜಾಗದಲ್ಲಿ ಆಟೊಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳು ನಡೆದಾಡಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಚಾರ ದಟ್ಟಣೆಯಿಂದ ಅನೇಕ ವೇಳೆ ರೈಲು ಪ್ರಯಾಣಿಕರು ರೈಲನ್ನು ತಪ್ಪಿಸಿಕೊಂಡಿದ್ದಾರೆ.
‘ರೈಲ್ವೆ ನಿಲ್ದಾಣ ರಸ್ತೆಯ ತರಕಾರಿ ಮಾರುಕಟ್ಟೆಯಿಂದ ರೈಲು ನಿಲ್ದಾಣವರೆಗೆ ರಸ್ತೆ ಇಕ್ಕಟ್ಟಾಗಿದ್ದು, ವಾಹನಗಳು ಮುಖಾಮುಖಿಯಾದರೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಅಲ್ಲದೇ ಪಾರ್ಕಿಂಗ್ಗಾಗಿ ಜಾಗ ಗುರುತಿಸಿದ್ದರೂ ವಾಹನಗಳನ್ನು ಅಡ್ಡಾಡಿದ್ದಿಯಾಗಿ ನಿಲ್ಲಿಸಲಾಗುತ್ತಿದೆ. ಕೂಡಲೇ ಸಂಚಾರ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಪ್ರಯಾಣಿಕರಾದ ಬಸವರಾಜ ಪಾಟೀಲ, ಅಶೋಕ ದೊಡ್ಡಮನಿ, ಹಣಮಂತ, ಮಹೇಶ ಒತ್ತಾಯಿಸಿದ್ದಾರೆ.