ಚಿಕ್ಕೋಡಿ: ಚಿಕ್ಕೋಡಿ ಜಿಲ್ಲೆ ರಚೆನೆಗೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶುಕ್ರವಾರ ಚಿಕ್ಕೋಡಿ ಹೋರಾಟ ಸಮಿತಿಯವರು ಚಿಂಚಣಿ ಹಾಗೂ ಚಿಕ್ಕೋಡಿ ಶ್ರೀಗಳ ಮುಂದಾಳತ್ವದಲ್ಲಿ ಮನವಿ ಸಲ್ಲಿಸಿದರು.
ಚಿಂಚಣಿಯ ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ಕಳೆದ 25 ವರ್ಷಗಳಿಂದ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಗಾಗಿ ಹೋರಾಟ ನಡೆದಿದೆ. ಜಿಲ್ಲೆಯಾಗುವುದರಿಂದ ಈ ಭಾಗದ ಹಳ್ಳಿಗಳಿಗೆ ಮರು ಜೀವ ಬರುತ್ತದೆ. ಆದ್ದರಿಂದ ಈ ಭಾಗದ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತಂದು ಬೆಳಗಾವಿ ಜಿಲ್ಲೆ ವಿಭಜನೆ ಮಾಡಿಸಿ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಗಳನ್ನು ಘೋಷಣೆ ಮಾಡಿಸಬೇಕು ಎಂದು ಆಗೃಹಿಸಿದರು.
ಜಿಲ್ಲಾ ಘೋಷಣೆ ಮಾಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟದ ದಾರಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಚಿಕ್ಕೋಡಿ ಸಂಪಾದನಾ ಮಹಾಸ್ವಾಮಿಗಳು ಮಾತನಾಡಿ, ಬೆಳಗಾವಿ ಜಿಲ್ಲೆ ವಿಭಜನೆಗೆ ಇರುವ ತಾಂತ್ರಿಕ ತೊಂದರೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರಕಾರದ ಮೇಲೆ ಈ ಭಾಗದ ಜನಪ್ರತಿನಿಧಿಗಳು ಮತ್ತು ಈ ಭಾಗದ ಸಚಿವರು ಒತ್ತಡ ತಂದು ಆ ಸಮಸ್ಯೆ ಇತ್ಯರ್ಥಗೊಳಿಸಿ ಆದಷ್ಟು ಬೇಗ ಜನರ ಹಿತದೃಷ್ಟಿಯಿಂದ ಚಿಕ್ಕೋಡಿ ಮತ್ತು ಗೋಕಾಕ ಎರಡನ್ನೂ ಜಿಲ್ಲೆಯನ್ನಾಗಿ ಘೋಷಣೆ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಜಿಲ್ಲಾ ಘೋಷಣೆಗೆ ಮುಂದಾಗದಿದ್ದಲ್ಲಿ ಈ ಭಾಗದ ಸ್ವಾಮಿಗಳು ಮತ್ತು ಜಿಲ್ಲಾ ಹೋರಾಟ ಸಮಿತಿಯನ್ನೊಳಗೊಂಡ ನಿಯೋಗ ತೆಗೆದುಕೊಂದು ಹೋಗಿ ಮುಖ್ಯಮಂತ್ರಿಗಳ ಮನೆ ಎದುರು ಹೋರಾಟ ನಡೆಸಲು ಮುಂದಾಗಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಮಾತನಾಡಿ, ಚಿಕ್ಕೋಡಿ ಜಿಲ್ಲೆ ಮಾಡಲು ಜಿನಪ್ರತಿನಿಧಿಗಳೇ ಅಡ್ಡಗಾಲು ಹಾಕುತ್ತಿದ್ದಾರೆಂಬ ಆರೋಪವಿದ್ದು, ಈ ಭಾಗದ ಜನಪ್ರತಿನಿಧಿಗಳು ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡಿಸುವ ಮೂಲಕ ಆರೋಪ ಮುಕ್ತರಾಗಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ವಕ್ತಾರ ತ್ಯಾಗರಾಜ ಕದಮ, ಬಿ.ಎಂ.ಸಂಗ್ರೋಳ್ಳಿ, ಉತ್ತಮ ಪಾಟೀಲ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಸಂಜು ಬಡಿಗೇರ, ಶಾಮ ರೇವಡೆ, ರಾಮಾ ಮಾನೆ, ತುಕಾರಾಮ ಕೋಳಿ, ರೇವಪ್ಪ ತಳವಾರ, ಎಸ್.ವೈ.ಹಂಜಿ, ಬಸವರಾಜ ಡಾಕೆ, ಶ್ರೀನಾಥ ಗಟ್ಟಿ, ಮುದ್ದುಸಾರ ಜಮಾದಾರ, ಮಂಜುನಾಥ ಪರಗೌಡ, ಸುರೇಶ ಬ್ಯಾಕುಡೆ, ಅಪ್ಪಾಸಾಬ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.