ಚಿಕ್ಕಮಗಳೂರು: ಹಣ, ಚಿನ್ನ ಕದಿಯುವವರನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಾರಿನಲ್ಲಿ ಬಂದ ಜನ 3 ಲೀಟರ್ ಹಾಲು ಕದ್ದೊಯ್ದಿದ್ದಾರೆ.ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರವಾಸಿ ವಾಹನದಲ್ಲಿ ಕೆಲವರು ಬೆಳಗಿನ ಜಾವ ಅಂಗಡಿ ಮುಂದೆ ಟ್ರೇನಲ್ಲಿದ್ದ ಹಾಲಿನ ಪ್ಯಾಕೇಟ್ಗಳಲ್ಲಿ ಮೂರು ಲೀಟರ್ ಹಾಲನ್ನ ಕದ್ದೋಯ್ದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಿಂದ ಮಂಗಳೂರು, ಧರ್ಮಸ್ಥಳಕ್ಕೆ ಹೋಗಬೇಕೆಂದರೆ ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರದ ಮೂಲಕವೇ ಹೋಗಬೇಕು. ಆದರೆ ಅಂಗಡಿ ಮುಂದಿನ ಹಾಲಿನ ಟ್ರೇನಲ್ಲಿದ್ದ ಹಾಲನ್ನು ಕದ್ದವರು ಪ್ರವಾಸಿಗರೋ, ಮಂಗಳೂರಿನಿಂದ ಬಂದವರೋ ಅಥವಾ ಸ್ಥಳಿಯರೋ ಎಂಬುದು ಸ್ಪಷ್ಟವಾದ ಮಾಹಿತಿ ಇಲ್ಲ.
ಹಾಲಿನ ಟ್ರೇ ಪಕ್ಕದಲ್ಲೇ ಕಾರನ್ನು ನಿಲ್ಲಿಸಿ ಹಾಲಿನ ಪ್ಯಾಕೆಟ್ ಕದಿಯುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಣಕಲ್ ಗ್ರಾಮದಲ್ಲಿ ಇಂತಹ ಪ್ರಕರಣ ಇದೇ ಮೊದಲಲ್ಲ, ಈ ಹಿಂದೆ ಕೂಡ ಹಲವು ಬಾರಿ ಈ ರೀತಿಯ ಹಾಲಿನ ಪ್ಯಾಕೇಟ್ ಕಳ್ಳತನವಾಗುತ್ತಿತ್ತು. ಕಳೆದ 15 ದಿನಗಳ ಹಿಂದಷ್ಟೆ ಕೊಟ್ಟಿಗೆಹಾರದಲ್ಲಿ 19 ಲೀಟರ್ ಹಾಲನ್ನು ಕದ್ದಿದ್ದರು. ಬಣಕಲ್ ಹಾಗೂ ಕೊಟ್ಟಿಗೆಹಾರದ ಭಾಗದಲ್ಲಿ ಆಗಾಗ್ಗೆ ಈ ರೀತಿ ಹಾಲಿನ ಕಳ್ಳರು ಕಾಣಿಸಿಕೊಳ್ಳುತ್ತಿದ್ದಾರೆ. ಕಳ್ಳರು ಸ್ಥಳಿಯರೋ ಅಥವಾ ಪ್ರವಾಸಿಗರೋ ಎಂಬ ಬಗ್ಗೆ ಸ್ಥಳೀಯರು ಗೊಂದಲದಲ್ಲಿದ್ದಾರೆ.