ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು ಪಾಲಾಗಲಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್, ಒಂದು ವಾರದೊಳಗೆ ಶರಣಾಗುವಂತೆ ಶರಣರಿಗೆ ಸೂಚಿಸಿದೆ.
ಕಳೆದ ವರ್ಷ ನ. 8ರಂದು ಕರ್ನಾಟಕ ಹೈಕೋರ್ಟ್ ಶರಣರಿಗೆ ಜಾಮೀನು ನೀಡಿತ್ತು. ಈಗ ಈ ಆದೇಶವನ್ನು 4 ತಿಂಗಳ ಕಾಲ ಅಮಾನತಿನಲ್ಲಿಟ್ಟಿರುವ ಸುಪ್ರೀಂ ಕೋರ್ಟ್, 4 ತಿಂಗಳೊಳಗೆ ಪ್ರಮುಖ ಸಾಕ್ಷ್ಯಗಳ ವಿಚಾರಣೆ ನಡೆಸಬೇಕು ಎಂದು ವಿಚಾರಣ ನ್ಯಾಯಾಲಯಕ್ಕೆ ಸೂಚಿಸಿದೆ. ಒಂದು ವೇಳೆ 4 ತಿಂಗಳಿನಲ್ಲಿ ವಿಚಾರಣೆ ಪೂರ್ಣಗೊಳ್ಳದಿದ್ದರೆ ಹೆಚ್ಚುವರಿಯಾಗಿ 2 ತಿಂಗಳು ಹೆಚ್ಚಳಕ್ಕಾಗಿ ಅರ್ಜಿ ಸಲ್ಲಿಸಬಹುದು. ಒಟ್ಟಿನಲ್ಲಿ ಪ್ರತಿ ನಿತ್ಯ ವಿಚಾ ರಣೆ ನಡೆಸಿಯಾದರೂ ಸರಿ, ಒಂದು ವರ್ಷದೊ ಳಗಾಗಿ ವಿಚಾರಣೆ ಪೂರ್ಣಗೊಳಿಸಬೇಕು ಎಂದೂ ಸೂಚಿಸಿದೆ. ಸಂತ್ರಸ್ತೆಯರ ತಂದೆಯ ಪರ ವಕೀಲೆ ಅಪರ್ಣಾ ಭಟ್, ಈ ಪ್ರಕರಣದಲ್ಲಿ ಸಂತ್ರಸ್ತೆಯರಿಬ್ಬರು ಅಪ್ರಾಪ್ತರಾಗಿದ್ದಾರೆ. ಹೀಗಾಗಿ ಪೋಕ್ಸೋ ಅಡಿ ಪ್ರಕರಣ ದಾಖಲಿಸಲಾಗಿದೆ.
ಜಾಮೀನು ನೀಡಿರುವುದು ಸರಿಯಲ್ಲ. ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದು ಮಾಡಬೇಕು ಎಂದು ಕೋರಿದರು.
ಬಾಲಕಿಯರನ್ನು ಕ್ರಮವಾಗಿ 3.5 ವರ್ಷ ಮತ್ತು 1.5 ವರ್ಷ ಲೈಂಗಿಕವಾಗಿ ಹಿಂಸಿಸಲಾಗಿದೆ. ಈ ವಿಷಯವನ್ನು ಬಾಯಿ ಬಿಡದಂತೆ ಬೆದರಿಕೆ ಹಾಕಲಾಗಿದೆ. ಇಬ್ಬರು ಬಾಲಕಿಯರು ಮ್ಯಾಜಿಸ್ಟ್ರೇಟ್ ಅವರ ಮುಂದೆ ನೀಡಿದ ಹೇಳಿಕೆಯಲ್ಲಿ ತಮ್ಮನ್ನು ತೀವ್ರವಾಗಿ ಥಳಿಸಲಾಗಿದೆ ಎಂದು ಹೇಳಿದ್ದಾರೆ.