ಐಪಿಎಲ್ನಿಂದ ಹೊರಗುಳಿಯಲಿದ್ದಾರೆ ರೋಹಿತ್ ಶರ್ಮ!
ಮುಂಬಯಿ: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಟಿ20 ವಿಶ್ವಕಪ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ಬೆನ್ನು ನೋವಿನಿಂದ ಬಳಲುತ್ತಿರುವ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ಇನ್ನುಳಿದ ಮೂರು ಐಪಿಎಲ್(IPL 2024) ಪಂದ್ಯಗಳಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.ಇಂದು ನಡೆಯುವ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ಎದುರಿನ ಪಂದ್ಯದಲ್ಲಿಯೂ ರೋಹಿತ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.
ಕಳೆದ ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ರೋಹಿತ್ಗೆ ಸಣ್ಣ ಮಟ್ಟಿನ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಆ ಪಂದ್ಯದಲ್ಲಿ ಕೇವಲ ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟಿಂಗ್ ಮಾತ್ರ ಮಾಡಿದ್ದರು. ಫೀಲ್ಡಿಂಗ್ ಮಾಡಿರಲಿಲ್ಲ. ರೋಹಿತ್ ಗಾಯದ ಬಗ್ಗೆ ಪಂದ್ಯ ಮುಕ್ತಾಯದ ಬಳಿಕ ತಂಡದ ಹಿರಿಯ ಸ್ಪಿನ್ನರ್ ಚಾವ್ಲಾ ಮಾಹಿತಿ ನೀಡಿದ್ದರು. ಬೆನ್ನು ನೋವು ಸಣ್ಣ ಪ್ರಮಾಣದ್ದಾಗಿದ್ದು ಯಾವುದೇ ಆತಂಕ ಪಡಬೇಕಿಲ್ಲ ಎಂದಿದ್ದರು.
ರೋಹಿತ್ ಶರ್ಮ ಈ ಬಾರಿಯ ಐಪಿಎಲ್ನಲ್ಲಿ ಅಷ್ಟಾಗಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರಿಲ್ಲ. ಆಡಿದ 11 ಇನಿಂಗ್ಸ್ಗಳಿಂದ ಕೇವಲ 326 ರನ್ ಮಾತ್ರ ಗಳಿಸಿದ್ದಾರೆ. ಅವರ ಈ ಬ್ಯಾಟಿಂಗ್ ವೈಫಲ್ಯಕ್ಕೆ ನಾಯಕತ್ವ ಬದಲಾವಣೆಯೂ ಕೂಡ ಕಾರಣವಾಗಿರಬಹುದು. 5 ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರೂ ಏಕಾಏಕಿ ತಂಡದ ನಾಯಕತ್ವದಿಂದ ಕೆಳಗಿಳಿಸಿದ ಅಸಮಾಧಾನವೂ ಇರಬಹುದು. ಮುಂದಿನ ಆವೃತ್ತಿಯಲ್ಲಿ ಮುಂಬೈ ತೊರೆದು ಬೇರೆ ತಂಡದ ಪರ ಆಡಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.