ಬೈಲಹೊಂಗಲ: ತಾಲ್ಲೂಕಿನ ಯರಡಾಲ ಗ್ರಾಮದಲ್ಲಿ ಏ.15 ರಿಂದ 27 ರವರೆಗೆ ಗ್ರಾಮದೇವಿ ಜಾತ್ರೆ ನೆರವೇರಲ್ಲಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ಸುಮಾರು ಒಂಬತ್ತು ವರ್ಷಗಳ ನಂತರ ನೆರವೇರುತ್ತಿರುವ ಜಾತ್ರೆಗೆ ಗ್ರಾಮಕ್ಕೆ ರಾಜ್ಯ, ಹೊರ ರಾಜ್ಯದಲ್ಲಿರುವ ಬಂಧು, ಬಳಗ, ಸ್ನೇಹಿತರು ಕುಟುಂಬ ಸಮೇತರಾಗಿ ಗ್ರಾಮಕ್ಕೆ ಲಗ್ಗೆ ಇಡುತ್ತಿದ್ದಾರೆ.
ಗ್ರಾಮದ ಪ್ರತಿ ಬೀದಿಗಳನ್ನು ಶುಚಿಗೊಳಿಸಲಾಗುತ್ತಿದ್ದು, ತಳಿರು, ತೋರಣ, ರಂಗೋಲಿ ಬಿಡಿಸಲಾಗುತ್ತಿದೆ. ಗ್ರಾಮ ಸಂಪೂರ್ಣ ಸಿಂಗಾರಗೊಂಡಿದೆ.
ಪೂರ್ಣಗೊಂಡ ಸಿದ್ಧತೆ: ಜಾತ್ರೆಗೆ ಈಗಾಗಲೇ ಬಹುತೇಕ ಎಲ್ಲ ಸಿದ್ದತೆಗಳು ಪೂರ್ಣಗೊಂಡಿದ್ದು ಜಾತ್ರಾ ಮಹೋತ್ಸವಕ್ಕೆ ಗ್ರಾಮಸ್ಥರು ಕಾತರರಾಗಿದ್ದಾರೆ. ತಾರಿಹಾಳ ಬಡೇಕೊಳ್ಳಮಠದ ಶಿವಯೋಗಿ ನಾಗೇಂದ್ರ ಸ್ವಾಮೀಜಿ, ಅವರೊಳ್ಳಿ ರುದ್ರಸ್ವಾಮಿಮಠದ ಪೂಜ್ಯಚನ್ನಬಸವ ದೇವರು, ಹಿರೇಮಠದ ದುಂಡಯ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಿತ್ಯ ಧಾರ್ಮಿಕ, ಅಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜಾತ್ರಾ ಮಹೋತ್ಸವ ಕಮಿಟಿ ಅಧ್ಯಕ್ಷ ಸಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸುವರು.
ಜಾತ್ರೆ ಕಾರ್ಯಕ್ರಮಗಳು: ಏ.15 ರಂದು ಮುಂಜಾನೆ ಗ್ರಾಮದ ಸರ್ವ ದೇವತೆಗಳಿಗೆ ಅಭಿಷೇಕ, ಪಾಲಕಿ ಉತ್ಸವ, ರಾತ್ರಿ 10ಕ್ಕೆ ಅಂಜನಿಪುತ್ರ ಕಲಾ ಬಳಗ, ವಿಠಲ ಚಕ್ಕಾಲಗುಂಡಿ ಅವರಿಂದ ‘ಮಗ ಹೋದರು ಮಾಂಗಲ್ಯ ಬೇಕು’ ಎಂಬ ನಾಟಕ ಪ್ರದರ್ಶನವಾಗಲಿದೆ. ಏ.16 ರಂದು ಶ್ರೀದೇವಿ ಜೋಡನಾ ವಿಶೇಷ ಪೂಜೆ ನಡೆಯಲಿದೆ. ಏ.17 ರಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಗಳ ಸಮ್ಮುಖದಲ್ಲಿ ಗ್ರಾಮದೇವಿ ಪ್ರಾಣ ಪ್ರತಿಷ್ಠಾಪನೆ, ಮಾಂಗಲ್ಯಧಾರಣೆ, ಅಕ್ಷತಾರೋಪಣ, ಹೊನ್ನಾಟ ಜರುಗುವದು. ರಾತ್ರಿ 10ಕ್ಕೆ ಸಿಂದೊಳ್ಳಿ ಕರಿಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದಿಂದ ಡೊಳ್ಳನ ಪದಗಳು ನಡೆಯಲಿವೆ.
ಏ.18 ರಂದು ಮುಂಜಾನೆ ಹೊನ್ನಾಟ, ರಾತ್ರಿ 9ಕ್ಕೆ ಗಾಯಕಿ ಜ್ಯೋತಿ ಗುಳೇದಗುಡ್ಡ ಅವರಿಂದ ರಸಮಂಜರಿ ನಡೆಯಲಿದೆ. ಏ.19 ರಂದು ಮುಂಜಾನೆ 6.30 ಕ್ಕೆ ದೇವಿ ಪೂಜೆ, ಕುಂಕುಮಾರ್ಚನೆ, ದುರ್ಗಾ ಹೋಮ, ರಾತ್ರಿ 9.30ಕ್ಕೆ ಕುಂದಗೋಳ ಹರ್ಲಾಪೂರ ಯುವಜನ ಮತ್ತು ಸಾಂಸ್ಕೃತಿಕ ಅಭಿವೃದ್ದಿ ಕೇಂದ್ರದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಏ.20 ರಂದು ಮುಂಜಾನೆ 6.30 ಕ್ಕೆ ದೇವಿ ಪೂಜೆ ಮತ್ತು ಕುಂಕುಮಾರ್ಚನೆ, ಗ್ರಾಮಸ್ಥರಿಂದ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 9 ಕ್ಕೆ ವಿಜಯಪೂರ ಸಿದ್ದಾರ್ಥ ಬೈಚಾಳ ಅವರಿಂದ ರಸಮಂಜರಿ, ಏ.21 ರಂದು ಮುಂಜಾನೆ ಶ್ರೀದೇವಿಗೆ ವಿಶೇಷ ಪೂಜೆ, ಕುಂಕುಮಾರ್ಚನೆ, ಉಡಿ ತುಂಬುವ ಕಾರ್ಯಜರುಗಲಿದ್ದು, ರಾತ್ರಿ 9.30 ಕ್ಕೆ ಧಾರವಾಡದ ರತಿಕಾ ನೃತ್ಯ ನಿಕೇತನ ಭರತ ನಾಟ್ಯ, ಯರಡಾಲ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕçತಿಕ ಕಾರ್ಯಕ್ರಮಗಳು ನಡೆಯಲಿವೆ.
ಏ. 22 ರಂದು ಮುಂಜಾನೆ ಪೂಜೆ, ಪ್ರಾರ್ಥನೆ ನಡೆಯಲಿದ್ದು ರಾತ್ರಿ 9 ಕ್ಕೆ ತಾಳಿಕೋಟಿ ಗುರು ಬಸವೇಶ್ವರ ನಾಟ್ಯ ಸಂಘದಿಂದ ‘ರೊಕ್ಕ ಇದ್ದವಂಗ್ ಸೊಕ್ಕ ಬಾಳ’ ನಾಟಕ, ಏ.23 ರಂದು ಮುಂಜಾನೆ 6.30 ಕ್ಕೆ ಕುಂಕುಮಾರ್ಚಣೆ, ಬೆಳಿಗ್ಗೆ 11 ಕ್ಕೆ ಉಡಿ ತುಂಬುವ ಕಾರ್ಯಕ್ರಮ.
ಸಂಜೆ 7 ಕ್ಕೆ ಧರ್ಮಸಭೆ, ಏ.24 ರಂದು ಮುಂಜಾನೆ ವಿಶೇಷ ಪೂಜೆ, ವಿವಿಧ ಬಡಾವಣೆ ನಾಗರಿಕರಿಂದ ಉಡಿ ತುಂಬುವ ಕಾರ್ಯಕ್ರಮ. ರಾತ್ರಿ 9 ಕ್ಕೆ ಲಕ್ಷ್ಮೇಶ್ವರ ಜೈ ಮಾತೃಭೂಮಿ ಕಲಾ ಸಂಘದಿಂದ ದುಡ್ಡು ದಾರಿ ಬಿಡಿಸಿತು ನಾಟಕ, ಏ.25 ರಂದು ಬೆಳಿಗ್ಗೆ ಕುಂಕುಮಾರ್ಚನೆ, ಸಂಜೆ ಶ್ರೀದೇವಿ ಸೀಮೆಗೆ ಹೋಗುವಳು. ಏ.27 ರಂದು ರಾತ್ರಿ 9ಕ್ಕೆ ಕನ್ನಡ ಕೋಗಿಲೆ ಮಹನ್ಯಾ ಪಾಟೀಲ ತಂಡದಿಂದ ರಸಮಂಜರಿ ನೆರವೇರಲಿದೆ. ಪ್ರತಿದಿನ ಚನ್ನಬಸವ ದೇವರು ಇವರಿಂದ ಅಧ್ಯಾತ್ಮ ಪ್ರವಚನ ಜರುಗಲಿದೆ.
ಬೈಲಹೊಂಗಲ ತಾಲ್ಲೂಕಿನ ಯರಡಾಲ ಗ್ರಾಮದ ಗ್ರಾಮದೇವಿ ದೇವಸ್ಥಾನ ಜಾತ್ರೆಗೆ ಸಿದ್ದಗೊಂಡಿರುವುದುಸಿ.ಆರ್.ಪಾಟೀಲ ಕಮಿಟಿ ಅಧ್ಯಕ್ಷಜಾತ್ರೆಗೆ ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಯಾವುದೇ ಅಡಚಣೆ ಆಗದಂತೆ ಜಾಗೃತಿವಹಿಸಲಾಗಿದೆ. ಒಂಬತ್ತು ವರ್ಷಗಳ ನಂತರ ಅದ್ಧೂರಿ ಜಾತ್ರೆ ನೇರವೇರಿಸಲಾಗುತ್ತಿದೆ. ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲ ಆಗುವಂತೆ ಕುಡಿಯುವ ನೀರು ಪ್ರಸಾದ ವ್ಯವಸ್ಥೆ ಮಾಡಲಾಗಿದೆ.