ಹಿರಿಯ ನಾಗರಿಕರ ಮತದಾನ ಗೌಪ್ಯತೆ ಉಲ್ಲಂಘನೆ: ರಾಜ್ಯ ಚುನಾವಣೆ ಆಯೋಗ ಮಹತ್ವದ ಹೇಳಿಕೆ
ಬೆಂಗಳೂರು, ಏಪ್ರಿಲ್ 14: ಲೋಕಸಭಾ ಚುನಾವಣೆಗಾಗಿ 85 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಮನೆಯಿಂದ ಮತದಾನಕ್ಕೆ ಅವಕಾಶ ನೀಡಲಾಗಿದೆ. ಶನಿವಾರ ಏಪ್ರಿಲ್ 13ರಿಂದಲೇ ಗೌಪ್ಯ ಮತದಾನ ಮಾಡಿಕೊಳ್ಳಲಾಗಿದೆ. ಇಂದು ಭಾನುವಾರ ಎರಡನೇ ದಿನದ ಮತದಾನ ನಡೆಯುತ್ತಿದೆ. ಈ ಹಿರಿಯ ನಾಗರಿಕರ ಮನೆಯಿಂದ ಮತದಾನದ ಗೌಪ್ಯತೆ ಕುರಿತು ಕರ್ನಾಟಕ ರಾಜ್ಯ ಚುನಾವಣೆ ಆಯೋಗ ಮಹತ್ವದ ಹೇಳಿಕೆ ನೀಡಿದೆ.
ಈ ಮನೆಯಿಂದ ಮತದಾನ ಕುರಿತು ಶನಿವಾರ (ಏ.13) ದಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ಏಜೆಂಟ್ ವೊಬ್ಬರು ದೂರು ನೀಡಿದ್ದರು. ಇದರಲ್ಲಿ ಹಿರಿಯ ನಾಗರೀಕರ ಮತದಾನದ ಸಮಯದಲ್ಲಿ ಮತದಾನದ ಗೌಪ್ಯತೆ ಮತ್ತು ಮತದಾರರಿಗೆ ಪ್ರಭಾವ ಬೀರುವ ಚಟುವಟಿಕೆಗಳು ನಡೆದಿದೆ ಎಂದು ತಿಳಿಸಿದ್ದ ದೂರನ್ನು ಆಯೋಗ ಕೂಲಕಂಷವಾಗಿ ಪರಿಶೀಲಿಸಿಲಿಸಿದೆ.
ಮತದಾನದ ಗೌಪ್ಯತೆಯ ಉಲ್ಲಂಘನೆ ಆಗಿಲ್ಲ
ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯಲ್ಲೂ ಮತದಾನದ ಗೌಪ್ಯತೆಯ ಉಲ್ಲಂಘನೆ ಆಗಿಲ್ಲ. ಮತದಾರರಿಗೆ ಪ್ರಭಾವ ಬೀರುವ ಚಟುವಟಿಕೆಗಳು ಆಗಿಲ್ಲ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಗೊಂದಲ ನಿವಾರಿಸಿದ್ದಾರೆ.
ವಾರ್ಡ್ ಸಂಖ್ಯೆ 108 ಶ್ರೀರಾಮಮಂದಿರ, ರಾಜಾಜಿನಗರ ಬೆಂಗಳೂರಿನಲ್ಲಿ ಏ. 13 ರಂದು 85 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರೀಕರ ಮತದಾನದ ಸಮಯದಲ್ಲಿ ಮತದಾನದ ಗೌಪ್ಯತೆ ಕಾಪಾಡಿಕೊಳ್ಳಲಾಗಿಲ್ಲ. ಮತದಾರರಿಗೆ ಪ್ರಭಾವ ಬೀರಲಾಗಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಏಜೆಂಟರು ದೂರು ನೀಡಿದ್ದರು.
ಮತದಾನ ವೇಳೆ ವಿಡಿಯೋ ಚಿತ್ರೀಕರಣ, ಪರಿಶೀಲನೆ
ಈ ಬಗ್ಗೆ ತುರ್ತಾಗಿ ತನಿಖೆ ನಡೆಸಿ ವರದಿಯನ್ನು ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಬೆಂಗಳೂರು ಹಾಗೂ ಮುಖ್ಯ ಆಯುಕ್ತರು ಬಿಬಿಎಂಪಿ ಇವರಿಗೆ ಸೂಚನೆ ನೀಡಲಾಗಿತ್ತು. ಸದ್ಯ ದೂರಿನ ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸಿರುವ ಜಿಲ್ಲಾ ಚುನಾವಣಾಧಿಕಾರಿಗಳು ವರದಿಯನ್ನು ನೀಡಿದ್ದಾರೆ.
ಈ ವರದಿಯಲ್ಲಿ ವಿಡಿಯೋ ಚಿತ್ರಿಕರಣ, ಛಾಯಾಚಿತ್ರಗಳ ಪರಿಶೀಲನೆ ಹಾಗೂ ಮೈಕ್ರೋ ಅಬ್ಸರ್ವರ್ ಅವರ ವರದಿಯ ಆಧಾರದ ಮೇಲೆ ಮತದಾನದ ಗೌಪ್ಯತೆಯನ್ನು ಉಲ್ಲಂಘನೆ ಆಗಿಲ್ಲ ಎಂಬುದು ಗೊತ್ತಾಗಿದೆ. ಇನ್ನು ಮತದಾರರಿಗೆ ಪ್ರಭಾವ ಬೀರುವ ಚಟುವಟಿಕೆಗಳು ಆಗಿಲ್ಲ ಎಂಬುದನ್ನು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಸೂಕ್ತ ರೀತಿ ಕರ್ತವ್ಯ ನಿರ್ವಹಣೆ ಆಗಿದೆ
ಒಂದು ಮನೆಯಿಂದ ಇನ್ನೊಂದು ಮನೆಗೆ ಮತದಾನದ ಪ್ರಕ್ರಿಯೆ ಮಾಡುವಾಗ ಪಿಆರ್ಓ ರವರ ಚುನಾವಣಾ ಗುರುತಿನ ಚೀಟಿ ಕಳೆದುಹೋಗಿದ್ದು, ಇನ್ನುಳಿದ ಪೋಲಿಂಗ್ ಅಧಿಕಾರಿಗಳು ಗುರುತಿನ ಚೀಟಿಯನ್ನು ಧರಿಸಿಕೊಂಡು ಕರ್ತವ್ಯ ನಿರ್ವಹಿಸಿದ್ದಾರೆ.
ಪಿಆರ್ಓ ರವರಿಗೆ ತಕ್ಷಣ ಮತ್ತೊಂದು ಚುನಾವಣಾ ಗುರುತಿನ ಚೀಟಿ ವಿತರಿಸಲಾಗಿದೆ. ಅಂದು ನಡೆದ ಮತದಾನದ ಸಂಧರ್ಭದಲ್ಲಿ ಚುನಾವಣಾ ಕರ್ತವ್ಯಗಳನ್ನು ನಿಯಮಾನುಸಾರ ನಿರ್ವಹಿಸಿ, ಯಾವುದೇ ರೀತಿಯ ಮತದಾನ ಗೌಪ್ಯತೆಯನ್ನು ಉಲ್ಲಂಘನೆ ಮಾಡದೇ ಯಾವುದೇ ಪಕ್ಷದ ಚುನಾವಣೆ ಅಭ್ಯರ್ಥಿಗಳ ಏಜೆಮಟರ್ಗಳ ಜೊತೆಗೂಡಿ ಮತದಾರರಿಗೆ ಪ್ರಭಾವ ಬೀರುವಂತಹ ಪ್ರಕ್ರಿಯೆಗಳು ನಡೆಯದೇ ಇರುವುದನ್ನು ವಿಡಿಯೋ ತುಣುಕುಗಳಿಂದ ಖಚಿತಪಡಿಸಿಕೊಳ್ಳಲಾಗಿದೆ ಎಂದರು.
ಮತದಾನ ಗೌಪ್ಯತೆ ಕುರಿತು ದೂರುದಾರರು ಹೇಳಿರುವಂತೆ ಯಾವುದೇ ಮತದಾನದ ಅಧಿಕಾರಿ/ನೌಕರರು ಹಾಗೂ ಕಂದಾಯ ನಿರೀಕ್ಷಕರು ಹಾಗ ಮೈಕ್ರೋ ಅಬ್ಸರ್ವರ್ ಗಳ ವಿರುದ್ಧ ಕ್ರಮ ತಗೆದುಕೊಳ್ಳುವ ಅಂಶ ಕಂಡು ಬರದೇ ಇರುವುದರಿಂದ ದೂರುದಾರರ ದೂರ ಅರ್ಜಿಗಳನ್ನು ಅಂತ್ಯಗೊಳಿಸಲಾಗಿದೆ ಎಂದು ರಾಜ್ಯ ಚುನಾವಣೆ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.