ವಿಜಯಪುರ: ರಾಜಕಾರಣದಿಂದ (Politics) ನಿವೃತ್ತಿಯಾಗುವ ಸೂಚನೆಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ನೀಡಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ (BJP) ಬಿಎಸ್ವೈ (BSY) ಕುಟುಂಬದ ಪ್ರಭಾವದ ಬಗ್ಗೆ ಅಸಮಾಧಾನ ಹೊರ ಹಾಕಿರುವ ಯತ್ನಾಳ್, ರಾಜ್ಯದಲ್ಲಿ ಪ್ರಾಮಾಣಿಕ ರಾಜಕಾರಣ ಅಸಾಧ್ಯವಾಗಿದೆ.
ಅಪ್ಪಾಜಿ ಎನ್ನಬೇಕು, ಹಣ ಬಲ ಬೇಕು, ಮೇಲಿನವರ ಇಷ್ಟಾರ್ಥ ಸಿದ್ದಿಗಳನ್ನು ಈಡೇರಿಸಬೇಕು. ಇಂತವೆಲ್ಲ ಮಾಡಲಾಗದಿದ್ದರೆ ರಾಜಕಾರಣ ಮಾಡಲಾಗಲ್ಲ ಎಂದು ಹೇಳಿದ್ದಾರೆ.
ಇದರೊಂದಿಗೆ 2028 ರ ವಿಧಾನಸಭೆ (Assemby Election) ಚುನಾವಣೆ ಬಳಿಕ ರಾಜಕೀಯ ನಿವೃತ್ತಿ ಘೋಷಿಸುವುದಾಗಿಯೂ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.
ರಾಜ್ಯಲ್ಲಿ ರಾಜಕಾರಣದಲ್ಲಿ ಆರಾಮವಾಗಿರುವ ನನಗೆ ಕೇಂದ್ರಕ್ಕೆ ಹೋಗುವ ಆಸಕ್ತಿ, ಅವಶ್ಯಕತೆ ಇಲ್ಲ. ಇಲ್ಲಿ ವಂಶಪರಂಪರೆ ರಾಜಕೀಯ ಮುಗಿಯಬೇಕಿದೆ. ಮುಂದಿನ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ ಆಗಲಿದೆ ಎಂದು ಅವರು ಹೇಳಿದರು.
ಲೋಕಸಭೆಗೆ (Lok Sabha) ಸ್ಪರ್ಧಿಸುವ ವದಂತಿಗಳನ್ನು ತಳ್ಳಿ ಹಾಕಿದ ಅವರು, ಬಾಗಲಕೋಟೆ ಕ್ಷೇತ್ರದಲ್ಲಿ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಸಮರ್ಥರಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಅಲ್ಲಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಲ್ಲ. ಬೀದರ್ ಕ್ಷೇತ್ರದಿಂದಲೂ ಸ್ಪರ್ಧಿಸಲು ಕೆಲವರು ಮನವಿ ಮಾಡಿದ್ದಾರೆ. ಆದರೆ ಅಲ್ಲಿಯೂ ಸಮರ್ಥರಿದ್ದಾರೆ ಎಂದು ಲೋಕಸಭೆಗೆ ಸ್ಪರ್ಧಿಸುವ ಊಹಾಪೋಹಗಳಿಗೆ ತೆರೆ ಎಳೆದರು.