ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಒಳರೋಗಿಗಳು ಕೆಲ ಕಾಲ ಪರದಾಡಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ 10 ಗಂಟೆ ಆಸುಪಾಸಿನಲ್ಲಿ ವಿದ್ಯುತ್ ಕಡಿತಗೊಂಡ ಕಾರಣ ಆಸ್ಪತ್ರೆಯಲ್ಲಿದ್ದ ಒಳರೋಗಿಗಳು ಪರದಾಡುವಂತಾಗಿತ್ತು.
ಸೋಮವಾರ ರಾತ್ರಿ 10 ಗಂಟೆ ಆಸುಪಾಸಿನಲ್ಲಿ ವಿದ್ಯುತ್ ಕಡಿತಗೊಂಡ ಕಾರಣ ಆಸ್ಪತ್ರೆಯಲ್ಲಿದ್ದ ಒಳರೋಗಿಗಳು ಪರದಾಡುವಂತಾಗಿತ್ತು. ಇದರಿಂದ ಆಸ್ಪತ್ರೆಯಲ್ಲಿ ಕತ್ತಲುಮಯ ವಾತಾವರಣ ನಿರ್ಮಾಣವಾಗಿ ರೋಗಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ರೋಗಿಗಳು ಮತ್ತು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ಭಯದ ವಾತಾವರಣ ನಿರ್ಮಾಣವಾಗಿದೆ, ಜನರೇಟರ್ ಇದ್ದರೂ ಕೂಡ ಸಿಬ್ಬಂದಿ ಚಾಲನೆ ಮಾಡುತ್ತಿಲ್ಲ, ಮತ್ತು ಆರು ಗಂಟೆಯಿಂದ ವೈದ್ಯರನ್ನು ಹಿಡಿದು ಆಸ್ಪತ್ರೆಯ ಸಿಬ್ಬಂದಿಗಳು ಇಲ್ಲಿ ಕಾಣುತ್ತಿಲ್ಲ ಎಂದು ಆರೋಪಿಸಿ, ನಮಗೆ ತುಂಬಾ ಭಯವಾಗುತ್ತಿದೆ, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು, ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ ಎಂದು ಒಳ ರೋಗಿ ಸಂಬಂಧಿಕರಾದ ಪರಸಪ್ಪ ಎಂಬುವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಷಯಕ್ಕೆ ಸಂಬಂಧಿಸಿದಂತೆ ರಾಯಬಾಗ್ ವೈದ್ಯಾಧಿಕಾರಿ ಶಿವನಗೌಡ ಎಂ ಪಾಟೀಲ್ ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿ, ನಿನ್ನೆ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತವಾಗಿದ್ದರಿಂದ, ಸಮಸ್ಯೆ ಉದ್ಭವವಾಗಿದೆ. 10 ನಿಮಿಷ ಮಾತ್ರ ವಿದ್ಯುತ್ ಕಡಿತಗೊಂಡಿತ್ತು. ಸಮಯಕ್ಕೆ ಸರಿಯಾಗಿ ಜನರೇಟರ್ ಪ್ರಾರಂಭವಾಗದೆ ಇರುವುದಕ್ಕೆ ಈ ಸಮಸ್ಯೆ ಉದ್ಭವವಾಗಿದೆ, ನಾನು ಕೂಡ ಈಗಾಗಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದೇನೆ, ಈ ಲೋಪಕ್ಕೆ ಯಾರೇ ಕಾರಣ ಆಗಿದ್ದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದ್ದಾರೆ.