ಹುಬ್ಬಳ್ಳಿ: ರಾಜ್ಯಕ್ಕೆ ಕೇಂದ್ರದಿಂದ ಅಕ್ಕಿ ಸಿಗದಿರೋದಕ್ಕೆ ರಾಜ್ಯ ಬಿಜೆಪಿ ನಾಯಕರೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ಕಿ ವಿಷಯದಲ್ಲಿ ಕೇಂದ್ರ ಸರ್ಕಾರದವರು ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ. ನಾವು ಕೇಂದ್ರದಿಂದ ಉಚಿತವಾಗಿ ಅಕ್ಕಿ ಕೇಳುತಿಲ್ಲ. ನಮ್ಮ ರಾಜ್ಯದ ಬಿಜೆಪಿ ಮುಖಂಡರೇ ಹೇಳಿಕೊಟ್ಟ ಕಾರಣಕ್ಕೆ ರಾಜ್ಯಕ್ಕೆ ಅಕ್ಕಿ ಕೊಡುತ್ತಿಲ್ಲ. ಇದಕ್ಕೆ ನೇರವಾಗಿ ರಾಜ್ಯ ಬಿಜೆಪಿ ನಾಯಕರೇ ಕಾರಣ ಎಂದು ಕಿಡಿಕಾರಿದರು.
ಕೇಂದ್ರಕ್ಕೆ ನಾವೇನು ಉಚಿತವಾಗಿ ಅಕ್ಕಿ ಕೇಳತ್ತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಹೆಸರು ಬರುತ್ತೆ ಎಂದು ಈ ರೀತಿ ಬಿಜೆಪಿಯವರು ಮಾಡುತ್ತಿದ್ದಾರೆ. ಬರುವ ಅಗಸ್ಟ್ 15ರ ಒಳಗೆ ಎಲ್ಲ ಗ್ಯಾರಂಟಿ ಅನುಷ್ಠಾನ ಮಾಡುತ್ತೇವೆ. ಈ ಮೂಲಕ ನಾವು ನುಡಿದಂತೆ ನಡೆಯುತ್ತೇವೆ. 2013ರಲ್ಲಿ ನಾವು 165 ಭರವಸೆಗಳನ್ನು ಕೊಟ್ಟಿದ್ದೇವೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ 158 ಭರವಸೆಗಳನ್ನು ಈಡೇರಿಸಿದ್ದೆವು. ಬಿಜೆಪಿಯವರು 2018ರಲ್ಲಿ 600 ಭರವಸೆ ಕೊಟ್ರು, 2019ರಲ್ಲಿ ಅಧಿಕಾರಕ್ಕೆ ಬಂದರು ನಾಲ್ಕು ವರ್ಷ ಆಡಳಿತ ನಡೆಸಿದರು. 600 ಭರವಸೆಗಳಲ್ಲಿ ಅವರು ಈಡೇರಿಸಿದ್ದು ಕೇವಲ 60 ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.
ಗ್ಯಾರಂಟಿ ಕುರಿತಾಗಿ ಬಿಜೆಪಿಯವರು ಹೋರಾಟ ಮಾಡುತ್ತೇವೆ ಅಂದು ಹೇಳತ್ತಾರೆ. ನಾವು ಅದಕ್ಕೆ ಆಸ್ಪದ ಕೊಡಲ್ಲ, ನಾವು ಗ್ಯಾರಂಟಿ ಅನುಷ್ಠಾನ ಮಾಡ್ತೀವಿ. ಶಕ್ತಿ ಯೋಜನೆಯಲ್ಲಿ ಕೆಲ ಸಣ್ಣ ಪುಟ್ಟ ದೋಷಗಳಾಗಿವೆ. ಪ್ರಾರಂಭದಲ್ಲಿ ಮಹಿಳೆಯರು ಜಾಸ್ತಿ ಓಡಾಡುತ್ತಿದ್ದಾರೆ. ಕಾಲೇಜು ಪ್ರಾರಂಭವಾದ ಮೇಲೆ ಜನ ಕಡಿಮೆಯಾಗುತ್ತಾರೆ. ಪುಣ್ಯ ಕ್ಷೇತ್ರಗಳಿಗೆ ಜನ ಹೋಗುತ್ತಿದ್ದಾರೆ. ಒಂದು ಸಾರಿ ಹೋಗಿ ಬಂದವರು, ಮತ್ತೆ ಹೋಗಲ್ಲ. ಸಹಜವಾಗಿ ರಶ್ ಕಡಿಮೆಯಾಗುತ್ತದೆ ಎಂದರು.
ಸಾರಿಗೆ ಇಲಾಖೆ ಜನರ ಅನುಕೂಲಕ್ಕೆ ಇರೋದು. ದಿನಕ್ಕೆ 1 ಲಕ್ಷದ 56 ಸಾವಿರ ಸೆಡ್ಯೂಲ್ ಅಲ್ಲಿ ಬಸ್ ಓಡಾಡುತ್ತಿವೆ. ಸಾರಿಗೆ ಸಂಸ್ಥೆಗಳಿಗೆ ವಿಶೇಷ ಅನುದಾನ ಕೊಡಬೇಕಿತ್ತು. ನಮ್ಮ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಸಾರ್ವಜನಿಕರು ಸಹಕರಿಸಬೇಕು. ನಾವು ಈಗಾಗಲೇ ಸಿಬ್ಬಂದಿಗೆ ಸೌಜನ್ಯದಿಂದ ವರ್ತನೆ ಮಾಡುವಂತೆ ಎಚ್ಚರಿಕೆ ಕೊಟ್ಟಿದ್ದೇವೆ. ಬರುವ ದಿನಗಳಲ್ಲಿ ಎಲ್ಲ ಸಮಸ್ಯೆ ಪರಿಹಾರ ಮಾಡಿ, ಜನರಿಗೆ ಉತ್ತಮ ಸೇವೆ ನೀಡಲಾಗುವುದು ಎಂದು ಭರವಸೆ ನೀಡಿದರು.
10 ಕೆಜಿ ಉಚಿತ ಅಕ್ಕಿ ಯೋಜನೆ ಶೀಘ್ರವಾಗಿ ಜಾರಿ – ಜೈರಾಮ್ ರಮೇಶ್: ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ದೆಹಲಿಯಲ್ಲಿಂದು ಮಾತನಾಡಿದ ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ರಾಜ್ಯ ಸರ್ಕಾರದ 10 ಕೆಜಿ ಉಚಿತ ಅಕ್ಕಿ ಯೋಜನೆಯನ್ನು ಏನೇ ಆಗಲಿ ಶೀಘ್ರವಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಅನ್ನಭಾಗ್ಯ ಯೋಜನೆಯ ಅಕ್ಕಿ ವಿವಾದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಜೈರಾಮ್ ರಮೇಶ್, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ರೇವಿಡಿ (ಉಚಿತ) ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.