ನಂದಗಡ (ಖಾನಾಪುರ ತಾಲ್ಲೂಕು): ಕ್ರಾಂತಿಯ ನೆಲ, ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತ ತಾಲ್ಲೂಕಿನ ನಂದಗಡದಲ್ಲಿ ಈಗ ಸುಧಾರಣಾ ಪರ್ವ ಆರಂಭವಾಗಿದೆ. ಈ ಸ್ಥಳಕ್ಕೆ ಜಾಗತಿಕ ಗುರುತು ತಂದುಕೊಟ್ಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಈಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಹಲವು ವರ್ಷಗಳಿಂದ ನಂದಗಡ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಚನ್ನಮ್ಮನ ಕಿತ್ತೂರು, ಬೈಲಹೊಂಗಲದಲ್ಲಿ ಆದಂಥ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿಯೂ ಮಾಡಬೇಕು ಎಂದು ಜನ ದಶಕದಿಂದ ಹೋರಾಟ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಶುಕ್ರದೆಸೆ ಆರಂಭವಾಗಿದೆ.
ಗ್ರಾಮದಲ್ಲಿರುವ ರಾಯಣ್ಣನ ಸಮಾಧಿ ಸ್ಥಳ ಮತ್ತು ಗಲ್ಲಿಗೇರಿಸಿದ ಸ್ಥಳಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ‘ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪಿಸಿದೆ. ಈ ಪ್ರಾಧಿಕಾರದ ವತಿಯಿಂದ ಬ್ರಿಟಿಷರು ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ವೀರಭೂಮಿ ನಿರ್ಮಾಣ, ರಾಯಣ್ಣನ ಸಮಾಧಿ ಸ್ಥಳದ ಬಳಿ ಯಾತ್ರಿ ನಿವಾಸ ನಿರ್ಮಾಣ, ಐತಿಹಾಸಿಕ ಕೆರೆ ಜೀರ್ಣೋದ್ಧಾರ ಮಾಡಲಾಗಿದೆ.
ವಿಶೇಷ ಆಕರ್ಷಣೆ ಮಾಡುವ ರಾಕ್ ಗಾರ್ಡನ್, ಗರಡಿ ಮನೆ, ಸೈನಿಕ ಶಾಲೆ ಮತ್ತಿತರ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ದೊರೆತಿದೆ. ಪ್ರಾಧಿಕಾರದ ವತಿಯಿಂದ ರಾಯಣ್ಣನ ಜನ್ಮಭೂಮಿ ಸಂಗೊಳ್ಳಿಯಲ್ಲೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿವೀರ ರಾಯಣ್ಣನ ತ್ಯಾಗ- ಬಲಿದಾನಗಳು ಮುಂದಿನ ಪೀಳಿಗೆಗೆ ಸಚಿತ್ರವಾಗಿ ತಿಳಿಯಬೇಕು ಎಂಬ ಉದ್ದೇಶದಿಂದ ವೈವಿಧ್ಯಮಯ ಹಾಗೂ ದೂರದೃಷ್ಟಿಯ ಕೆಲಗಳನ್ನು ಮಾಡಲಾಗುತ್ತಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ ಒಂದು ಶತಮಾನ ಮುಂಚೆ ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮ ಕಿತ್ತೂರು ಸಂಸ್ಥಾನದ ಉಳಿವಿಗಾಗಿ ಬ್ರಿಟಿಷರೊಂದಿಗೆ ಕೆಚ್ಚೆದೆಯಿಂದ ಹೋರಾಟ ನಡೆಸಿದಳು. ಆ ಮೂಲಕ ದೇಶದ ಮೊದಲ ಸ್ವಾತಂತ್ರ್ಯದ ಕಿಡಿ ಎಂದೇ ಖ್ಯಾತಳಾದಳು. ಚನ್ನಮ್ಮನ ಬಲಗೈಬಂಟ ಎಂದೇ ಇತಿಹಾಸದಲ್ಲಿ ದಾಖಲಾದ ಸಂಗೊಳ್ಳಿ ರಾಯಣ್ಣ ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ನಂದಗಡಕ್ಕೆ ಬರುವ ಎಲ್ಲರಿಗೂ ಈ ಇತಿಹಾಸ ತಿಳಿಯುವಂತೆ ಮಾಡಲಾಗುತ್ತಿದೆ.