ಬೆಂಗಳೂರು: ಎಸ್ಸಿ-ಎಸ್ಟಿ ಮೀಸಲು ಪ್ರಮಾಣ ಹೆಚ್ಚಳ ಮಾಡಲು ಸರ್ಕಾರ ಒಂದು ಹೆಜ್ಜೆ ಮುಂದಿಡುತ್ತಿದ್ದಂತೆ ಉಳಿದ ಸಮುದಾಯಗಳು ಮೀಸಲು ಬುಟ್ಟಿಗೆ ಕೈಹಾಕಿ ಹೆಚ್ಚು ಪಾಲು ಪಡೆಯಲು ಅಥವಾ ಮೀಸಲು ಕೆಟಗರಿ ಬದಲಾವಣೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಯತ್ನಿಸಿವೆ.
ಪಂಚಮಸಾಲಿ ಸಮುದಾಯ ಸರ್ಕಾರಕ್ಕೆ ಡಿ.19ರ ಗಡುವು ನೀಡಿದ್ದರೆ, ಕುರುಬ, ಈಡಿಗ, ಬಿಲ್ಲವ ಬಲಿಜ, ವಿಶ್ವಕರ್ಮ ಮೊದಲಾದ ಸಮುದಾಯಗಳೂ ಬೇಡಿಕೆ ಈಡೇರಿಕೆಗೆ ಗಡುವಿನ ಹೋರಾಟ ನಡೆಸಿವೆ. ಇನ್ನೊಂದೆಡೆ ರಾಜ್ಯದಲ್ಲಿ ಪ್ರಬಲ ಒಕ್ಕಲಿಗ ಸಮುದಾಯವೂ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಪ್ರಬಲವಾಗಿ ಹಕ್ಕೊತ್ತಾಯ ಮಂಡಿಸಿದೆ. ಮೀಸಲು ಬೇಡಿಕೆ ಇಟ್ಟ ಸಮುದಾಯಗಳೆಲ್ಲ ಸಂಕ್ರಾಂತಿ ವೇಳೆಗೆ ಸಿಹಿಸುದ್ದಿ ನಿರೀಕ್ಷೆಯಲ್ಲಿವೆ. ಒಟ್ಟಾರೆ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿ ಪಾಲಿಗೆ ಚುನಾವಣೆ ಹೆಬ್ಬಾಗಿಲಲ್ಲಿ ‘ಮೀಸಲು ಸಂಕ್ರಮಣ’ ಎದುರಾಗಿದೆ.
ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳದ ಬೇಡಿಕೆ ಸಲುವಾಗಿ ದೊಡ್ಡ ಮಟ್ಟದಲ್ಲಿ ಒಗ್ಗೂಡಿದ್ದು, ಭಾನುವಾರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಮೀಸಲಾತಿ ಹೆಚ್ಚಳದ ರೂಪುರೇಷೆಯ ಪೂರ್ವಭಾವಿ ಸಭೆ ಮೀಸಲು ಪ್ರಮಾಣವನ್ನು ಹೆಚ್ಚಿಸಲು ಸರ್ಕಾರಕ್ಕೆ ಜ. 23ರ ಗಡುವು ನೀಡಲು ನಿರ್ಧರಿಸಿತು. ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ ಸಚಿವ ಆರ್. ಅಶೋಕ್ಗೆ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.