ಶಿವಮೊಗ್ಗ: ‘ಎಲ್ಲಿಯವರೆಗೆ ಸಾರ್ವಜನಿಕರು ಪೊಲೀಸರಿಗೆ ಸಹಕರಿಸುವುದಿಲ್ಲವೋ ಅಲ್ಲಿಯವರೆಗೆ ಸಮಾಜದಲ್ಲಿ ಅಶಾಂತಿ ಇದ್ದೇ ಇರುತ್ತದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಡಿಎಆರ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಕ್ಷಣೆಗೆ ಸಂಬಂಧಿಸಿದ ಹೊಣೆಗಾರಿಕೆ ಕೇವಲ ಯೋಧರು ಮತ್ತು ಪೊಲೀಸರದ್ದು ಅಲ್ಲ. ನಮ್ಮದೂ (ಸಾರ್ವಜನಿಕರದ್ದು) ಇದೆ ಎಂದರು.
ಪರರ ರಕ್ಷಣೆಗಾಗಿ ದೇಹ ತ್ಯಾಗ ಮಾಡುವವರು ಸೈನಿಕರು ಮತ್ತು ಪೊಲೀಸರು. ನಮ್ಮ ರಕ್ಷಣೆಗೆ ಬರುವವರು ಇವರಿಬ್ಬರೇ. ಅಧರ್ಮ ಮತ್ತು ಅನೀತಿ ಸಮಾಜದಲ್ಲಿ ಇರುವುದರಿಂದ ಪೊಲೀಸ್ ಮತ್ತು ಸೇನಾ ವ್ಯವಸ್ಥೆ ಅನಿವಾರ್ಯವಾಗಿದೆ.
ಗಾಂಜಾ ಬೆಳೆದವರನ್ನು ಹಿಡಿಯಲು ಹೋದ ಕಲಬುರಗಿ ಪೊಲೀಸರ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ದಾಳಿ ಆಗಿದೆ. ಇಂತಹ ಅಪಾಯಕಾರಿ ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುವ ಪೊಲೀಸರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಮಾತನಾಡಿ, ‘1959 ರ ಅ. 21ರಂದು ಭಾರತದ ಗಡಿಯನ್ನು ಚೀನಾದವರು ಅತಿಕ್ರಮಣ ಮಾಡಿದಾಗ ನಡೆದ ಗುಂಡಿನ ಚಕಮಕಿಯಲ್ಲಿ ದೇಶದ 9 ಯೋಧರು ಮೃತಪಟ್ಟಿದ್ದರು. ಅವರ ನೆನಪಿಗಾಗಿ ಅ. 21 ರಂದು ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.
ಕಳೆದೊಂದು ವರ್ಷದಲ್ಲಿ ದೇಶದಲ್ಲಿ 264 ಪೊಲೀಸರು ಮೃತರಾಗಿದ್ದಾರೆ. ಅವರಲ್ಲಿ ಕರ್ನಾಟಕದ 11 ಮಂದಿ ಸೇರಿದ್ದಾರೆ. ಆಂಧ್ರ, ತೆಲಂಗಾಣ, ಹಿಮಾಚಲ ಪ್ರದೇಶ, ಕೇರಳ, ತಮಿಳುನಾಡು, ತ್ರಿಪುರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪೊಲೀಸರು ಇದರಲ್ಲಿದ್ದಾರೆ.