ಬೆಂಗಳೂರು:ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸುರ್ಜೇವಾಲ ಕಥೆ ಬರೆದಿದ್ದಾರೆ. ಸಿದ್ದರಾಮಯ್ಯ ಡೈರೆಕ್ಟರ್ ಆಗಿದ್ದರೆ, ಡಿ.ಕೆ.ಶಿವಕುಮಾರ್ ಪ್ರೊಡ್ಯೂಸರ್. ಈ ಮೂವರು ಸೇರಿಯೇ ಪ್ರಕರಣವನ್ನು ಸೃಷ್ಟಿ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ದೂರಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುರ್ಜೆವಾಲ, ಸಿದ್ದರಾಮಯ್ಯ ಮತ್ತು ಶಿವಕುಮಾರ್. ಈ ತ್ರಿಬಲ್ ಎಸ್ ಮೂಲಕ ಪ್ಲಾನ್ ಮಾಡಿದ್ದಾರೆ ಎಂದರು.
ದೇವರಾಜೇಗೌಡ ಒಬ್ಬ ವಕೀಲ. ಅವರು ಆಡಿಯೋ ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ.
ಆಫರ್ ಕೊಟ್ಟಿರೋ ಬಗ್ಗೆ ಮಾತನಾಡಿದ್ದಾರೆ. ಈ ತ್ರಿಬ್ಬಲ್ ಎಸ್ ಟೀಂ, ಯಾರನ್ನ ಬಿಡುಗಡೆ ಮಾಡಬೇಕು, ಯಾರನ್ನ ಬಂಧಿಸಬೇಕು ಅಂತ ತೀರ್ಮಾನ ಮಾಡಿದ್ದಾರೆ ಅಂತ ಆರೋಪಸಿದರು.
ದೇವೇಗೌಡರ ಮೊಮ್ಮಗ ಅಂತ ಪ್ರಜ್ವಲ್ ರೇವಣ್ಣ ವಿರುದ್ಧ ಆಲ್ ಜಜೀರಾ, ಸಿಂಗಾಪುರ್ ಚಾನೆಲ್ನಲ್ಲಿ ಬರುವಂತೆ ಮಾಡಿದ್ದಾರೆ. ಇವರು ಒಕ್ಕಲಿಗ ವಿರೋಧಿಗಳು. ಹಿಂದೆ ವೀರೇಂದ್ರ ಪಾಟೀಲ್ ಅವರನ್ನ ಕೆಳಗೆ ಇಳಿಸಿದ್ದರು. ಯಡಿಯೂರಪ್ಪ ಅವರನ್ನ ತನಿಖೆ ಇಲ್ಲದೆ ಅಪರಾಧಿ ಮಾಡಿದ್ದರು ಎಂದರು.
ಎಸ್ಐಟಿ, ಸಿದ್ದರಾಮಯ್ಯ, ಡಿಕೆಶಿ ರಬ್ಬರ್ ಸ್ಟಾಂಪ್ ಆಗಿದೆ. ಇಷ್ಟು ಪೆನ್ ಡ್ರೈವ್ ಎಲ್ಲಿ ಮಾಡಿಸಿದ್ದು? ಹಂಚಿದವರು ಯಾರು? ಈ ಬಗ್ಗೆ ಇನ್ನೂ ಯಾಕೆ ಕ್ರಮ ಆಗಿಲ್ಲ? ವೀಡಿಯೋ ಹಂಚುವುದು ಅಪರಾಧ ಎಂದೇ ಎಸ್ಐಟಿ ಹೇಳಿದೆ. ಪೆನ್ಡ್ರೈವ್ ಕೊಟ್ಟ ಚಾಲಕನನ್ನು ಜೈಲಿಗೆ ಹಾಕಿಲ್ಲ. ಪೆನ್ಡ್ರೈವ್ ಹಂಚಿದವರಲ್ಲಿ ಎಷ್ಟು ಜನರನ್ನು ಎಸ್ಐಟಿ ಜೈಲಿಗೆ ಹಾಕಿದೆ ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ಡ್ರೈವರ್ ಮೂಲ ವ್ಯಕ್ತಿ ಅಂತ ದೇವರಾಜೇಗೌಡ ಹೇಳಿದ್ದಾರೆ. ಅವನನ್ನೆ ಸಿಂಗಾಪುರಕ್ಕೆ ಕಳಿಸಿದ್ದಾರೆ. ಒಬ್ಬ ಡ್ರೈವರ್ ಸಿಂಗಾಪುರಕ್ಕೆ ಹೋಗಿದ್ದಾನೆ ಅಂದ್ರೆ ಅಷ್ಟು ಹಣ ಎಲ್ಲಿ ಸಿಕ್ತು? ಇದು ಸ್ಪಾನ್ಸರ್ ಅಲ್ಲವಾ? ಅದಕ್ಕೆ ಎಸ್ಐಟಿ ರಬ್ಬರ್ ಸ್ಟಾಂಪ್ ಅಂತ ಹೇಳಿದ್ದು ಎಂದರು.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಕಾಂಗ್ರೆಸ್ ಕಾರಣ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲೆಂದೇ ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೀಗೆ ಪ್ಲಾನ್ ಮಾಡಿದ್ದಾರೆ ಎಂದರು.
ಈ ಪ್ರಕರಣದಲ್ಲಿ ಸರ್ಕಾರದ ಪಾತ್ರವಿದೆ ಎಂದು ಕಾನೂನು ತಜ್ಞರೇ ಹೇಳಿದ್ದಾರೆ.
ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಮತ್ತು ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ದೇವರಾಜೇಗೌಡ ನನಗೆ ಯಾವುದೇ ಮಾಹಿತಿ ಕೊಟ್ಟಿಲ್ಲ ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಅಬ್ಬೇಪಾರಿ ಆಗಿದೆ. ಇವರಿಗೆ ಮಾನ ಮರ್ಯಾದೆ ಇಲ್ಲ.
ಹೆಣ್ಣು ಮಕ್ಕಳ ಮಾನ, ಪ್ರಾಣ ರಕ್ಷಣೆ ಮಾಡ್ತೀವಿ ಅಂತ ಹೇಳಿ ಪ್ರಮಾಣವಚನ ಸ್ವೀಕರಿಸಿದವರು, ಈಗ ಪೆನ್ ಡ್ರೈವ್ ಹಂಚಿಕೆ ಮಾಡಿಕೊಂಡು ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವರಾಮೇಗೌಡ ಬಿಜೆಪಿಯಲ್ಲಿಲ್ಲ..
ಕಳೆದ ಚುನಾವಣೆಯಲ್ಲಿ ಶಿವರಾಮೇಗೌಡ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ. ಅವರು ಒಂಥರ ಎಡಬಿಡಂಗಿ ಆಗಿದ್ದಾರೆ. ಅವರು ನಮ್ಮ ಪಕ್ಷದಲ್ಲಿ ಈಗ ಇಲ್ಲ. ಆದರೆ, ಅವರ ಮಗ ಚೇತನ್ ಗೌಡ ನಮ್ಮ ಪಕ್ಷದಲ್ಲಿ ಇದ್ದಾರೆ ಎಂದು ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ರೇವಣ್ಣ ಅವರು ನಾನು ಇಂಗ್ಲೆಂಡ್ ಹೋಗಿದ್ದಾಗ ಹೀಗೆ ಮಾಡಿದ್ರು ಅಂತ ಹೇಳಿದ್ರು. ಅವರು ಅದೇ ಪಕ್ಷದಲ್ಲಿ ಎಂಪಿ ಆಗಿದ್ರು. ಆದರೂ ಯಾಕೆ ಆಗ ಹೇಳಲಿಲ್ಲ? ಎಂದು ಕೇಳಿದರು.