1. ದೀದಿ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ಕೆಲವೇ ಕ್ಷಣಗಳಲ್ಲಿ ನಿರ್ಧಾರವಾಗಲಿದೆ. ಭವಾನಿಪುರ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದೆ. ಭವಾನಿಪುರ ಕ್ಷೇತ್ರದಲ್ಲಿ ಕಳೆದ ಗುರುವಾರ ಮತದಾನ ನಡೆದು, ಶೇಕಡಾ 57ರಷ್ಟು ಮತದಾನವಾಗಿತ್ತು. ಅದರಂತೆ ಇಂದು ಬೆಳಿಗ್ಗೆ 8 ಗಂಟೆಗೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶಗಳು ಟ್ರೆಂಡ್ ಆಧಾರದ ಮೇಲೆ ಸ್ಪಷ್ಟವಾಗುತ್ತವೆ. ಇನ್ನು ಭವಾನಿಪುರ ಕ್ಷೇತ್ರದಲ್ಲಿ 21 ಸುತ್ತಿನ ಮತ ಎಣಿಕೆ ನಡೆಯಲಿದೆ.
2. ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಇಲ್ಲ ಅವಕಾಶ
ಕೊಡಗಿನ ತಲಕಾವೇರಿಯಲ್ಲಿ ಅಕ್ಟೋಬರ್ 17 ರ ಮಧ್ಯಾಹ್ನ 01 ಗಂಟೆ 11 ನಿಮಿಷಕ್ಕೆ ತೀರ್ಥೋದ್ಭವ ಸಂಭವಿಸಲಿದೆ. ಆದರೆ, ಕಾವೇರಿ ಮಾತೆ ತೀರ್ಥರೂಪಿಣಿಯಾಗುವುದನ್ನು ಕಣ್ತುಂಬಿಕೊಳ್ಳಲು ಈ ಬಾರಿಯೂ ಸರ್ಕಾರ ಸಾಕಷ್ಟು ನಿಯಮಗಳನ್ನು ಜಾರಿ ಮಾಡಿ ಆದೇಶ ಹೊರಡಿಸಿದೆ. ಕೋವಿಡ್ ಹಿನ್ನೆಲೆ ಭಕ್ತರಿಗೆ ತೀರ್ಥೋದ್ಭವದಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಿಲ್ಲ. ಹಾಗೇ ಹೊರ ಜಿಲ್ಲೆಗಳಿಂದ ಬರುವ ಭಕ್ತರು ತೀರ್ಥೋದ್ಭವದಲ್ಲಿ ಭಾಗವಹಿಸುವುದನ್ನೂ ನಿಷೇಧಿಸಲಾಗಿದೆ.
3. ‘ಜೈಲಿನಿಂದ ಬಂದವರಿಗೆ ಅದ್ಧೂರಿ ಸನ್ಮಾನ’
ಇತ್ತೀಚಿನ ದಿನಗಳಲ್ಲಿ ಭ್ರಷ್ಟರನ್ನು ದೂರುವುದು ಕಡಿಮೆ ಆಗುತ್ತಿದೆ ಅಂತ ನಿವೃತ್ತ ಲೋಕಾಯುಕ್ತ ನ್ಯಾಯಾಮೂರ್ತಿ ಸಂತೋಷ್ ಹೆಗಡೆ ಹೇಳಿದ್ದಾರೆ. ಮೈಸೂರಿನಲ್ಲಿ ಕೋಳಿ ಸಾಂಬರ್ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವ್ರು, ಜೈಲಿಗೆ ಹೋಗಿ ಬಂದವರಿಗೆ ಹಾರ ತುರಾಯಿ ಹಾಕಿ ಸನ್ಮಾನಿಸಿ, ಗೌರವಿಸಲಾಗುತ್ತಿದೆ. ಇದು ಸಮಾಜದ ತಪ್ಪಲ್ಲ, ಈ ಬಗ್ಗೆ ಪ್ರಶ್ನೆ ಮಾಡದ ವ್ಯಕ್ತಿಗಳದ್ದೇ ತಪ್ಪು ಅಂತ ಅಸಮಾಧಾನ ಹೊರಹಾಕಿದ್ದಾರೆ.
4. ಗಾಂಧೀಜಿಗೆ ಬುರ್ಜ್ ಖಲೀಪಾ ವಿಶೇಷ ಗೌರವ
ಸೌದಿ ಅರೇಬಿಯಾದ ಐಕಾನಿಕ್ ಕಟ್ಟಡ ಬುರ್ಜ್ ಖಲೀಫಾ ಮಹಾತ್ಮ ಗಾಂಧೀಜಿ ಜನ್ಮದಿನದ ಪ್ರಯುಕ್ತ ವಿಶೇಷ ಗೌರವವನ್ನು ಸಲ್ಲಿಸಿದೆ. ವರ್ಣರಂಜಿತ ಎಲ್ಇಡಿ ಪ್ರದರ್ಶನದ ಮೂಲಕ ಬಾಪೂ ಪ್ರಯಾಣದ ನೆನಪುಗಳನ್ನ ಗಗನಚುಂಬಿ ಕಟ್ಟಡದಲ್ಲಿ ಪ್ರದರ್ಶನ ಮಾಡಲಾಗಿದೆ. ಈ ಬಗ್ಗೆ ಬುರ್ಜ್ ಖಲೀಫಾ ಕಟ್ಟಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ತುಣುಕನ್ನ ಶೇರ್ ಮಾಡಿದೆ. ಹಲವು ಜನರೇಶನ್ಗಳಿಗೆ ಗಾಂಧೀಜಿ ಸ್ಪೂರ್ತಿಯಾಗಿದ್ದು, ನೀವು ಬಯಸುವ ಬದಲಾವಣೆ ನಿಮ್ಮ ಮೂಲಕವೇ ಪ್ರಾರಂಭವಾಗಲಿ ಎಂಬ ಗಾಂಧಿಯವರ ಸಂದೇಶವನ್ನು ನೆನಪಿಸಿಕೊಂಡಿದೆ.
5. ಸ್ವಿಗ್ಗಿ ಮೂಲಕ ಗಾಂಜಾ ಸಪ್ಲೈ, 7 ಮಂದಿ ಅಂದರ್
ಸ್ವಿಗ್ಗಿ ಮೂಲಕ ಗಾಂಜಾ ಸರಬರಾಜು ಮಾಡುತ್ತಿದ್ದ ಏಳು ಮಂದಿಯನ್ನ NCB ಅಧಿಕಾರಿಗಳು ಬಂಧಿಸಿದ್ದಾರೆ. ಲಾಕ್ಡೌನ್ ವೇಳೆ ಅಗತ್ಯ ಸೇವೆಗಳ ವಿನಾಯತಿ ಉಪಯೋಗಿಸಿಕೊಂಡು ಗಾಂಜಾ ಸರಬರಾಜು ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿದ NCB ತಂಡ 7 ಮಂದಿಯನ್ನ ಅರೆಸ್ಟ್ ಮಾಡಿದೆ. ಅಲ್ಲದೆ 5.20ಲಕ್ಷ ರೂಪಾಯಿ ಮೌಲ್ಯದ 142 ಕೆಜಿ ಹೈಬ್ರೀಡ್ ಗಾಂಜಾವನ್ನ ವಶಕ್ಕೆ ಪಡೆದಿದೆ. ಇದರ ಜೊತೆಗೆ ಎರಡು ವಾಹನಗಳನ್ನೂ ಜಪ್ತಿ ಮಾಡಲಾಗಿದೆ.
6. ನಾಲ್ವರು ಪರ್ವತಾರೋಹಿಗಳ ಸಾವು, ಮತ್ತಿಬ್ಬರಿಗೆ ಶೋಧ
ಉತ್ತರಾಖಂಡದ ತ್ರಿಶೂಲ್ ಪರ್ವತದಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ನೌಕಾಪಡೆಯ ನಾಲ್ವರು ಪರ್ವತಾರೋಹಿಗಳ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಇನ್ನೊಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ. ಮೃತ ಪರ್ವತಾರೋಹಿಗಳನ್ನ ರಜನಿಕಾಂತ್ ಯಾದವ್, ಯೋಗೀಶ್ ತಿವಾರಿ, ಅನಂತ್ ಕುಕ್ರೆತಿ ಮತ್ತು ಹರಿಯೋಮ್ ಎಂದು ಗುರುತಿಸಲಾಗಿದೆ. ಇನ್ನು,,. ಸೆಪ್ಟೆಂಬರ್ 3 ರಂದು, 20 ಪರ್ವತಾರೋಹಿಗಳ ತಂಡವು ಉತ್ತರಾಖಂಡಕ್ಕೆ ಹೊರಟಿತ್ತು. ಇದ್ರಲ್ಲಿ ತ್ರಿಶೂಲ್ ಪರ್ವತದ ತುದಿ ತಲುಪಲಿದ್ದಾಗ ಹಿಮಪಾತ ಸಂಭವಿಸಿದೆ.
7. ‘ಮದುವೆಗಿಂತಲೂ ವಿಚ್ಛೇದನವನ್ನ ಸಂಭ್ರಮಿಸಬೇಕು’
ತೆಲುಗಿನ ಚಿತ್ರರಂಗದ ಸ್ಟಾರ್ ಜೋಡಿ ಸಮಂತಾ ಮತ್ತು ನಾಗಚೈತನ್ಯ ತಮ್ಮ 4 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಮಧ್ಯೆ ಟಾಲಿವುಡ್ನ ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ನಾವು ಮದುವೆಗಿಂತಲೂ ವಿಚ್ಛೇದನ ಕಾರ್ಯಕ್ರಮಗಳನ್ನು ಹೆಚ್ಚಾಗಿ ಸಂಭ್ರಮಿಸಬೇಕು. ನಿಜವಾದ ಸಂಗೀತ ಮೊಳಗಬೇಕಿರೋದು ಡಿವೋರ್ಸ್ ಈವೆಂಟ್ಗಳಲ್ಲಿ. ಮದುವೆಗಳು ನರಕದಲ್ಲಿ ನಿಗದಿಯಾಗುತ್ತವೆ.. ಡಿವೋರ್ಸ್ಗಳು ಸ್ವರ್ಗದಲ್ಲಿ ನಿಗದಿಯಾಗುತ್ತವೆ ಅಂತಾ ಬರೆದಿದ್ದಾರೆ.
8. 2022ರ ಜ.7ಕ್ಕೆ ‘RRR’ ಚಿತ್ರ ಬಿಡುಗಡೆ
ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘RRR’ ಚಿತ್ರದ ರೀಲಿಸಿಂಗ್ ಡೇಟ್ ಅನೌನ್ಸ್ ಆಗಿದೆ. 2022ರ ಜನವರಿ 7ಕ್ಕೆ ಬಹುನಿರೀಕ್ಷಿತ ‘RRR’ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸುಮಾರು 400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ.
9. ಎಟಿಎಂ ಕೇಂದ್ರದಲ್ಲಿ ಭರ್ಜರಿ ಡ್ಯಾನ್ಸ್
ಸಾಮಾನ್ಯವಾಗಿ ಎಟಿಎಂ ಕೇಂದ್ರದೊಳಗೆ ಹೋಗುವಾಗ ಎಲ್ಲರೂ ಎಚ್ಚರಿಕೆ ವಹಿಸುತ್ತಾರೆ. ಬಹಳ ಜಾಗರೂಕತೆಯಿಂದಲೇ ಪಿನ್ ನಂಬರ್ ಹಾಕಿ ಹಣ ಡ್ರಾ ಮಾಡುತ್ತಾರೆ. ಆದರೆ, ಇಲ್ಲಿ ಯುವತಿಯೊಬ್ಬಳು ಎಟಿಎಂಗೆ ಹೋಗಿ ಹಣ ಡ್ರಾ ಮಾಡಿದ್ದಾಳೆ. ಬಳಿಕ ಹಣವನ್ನು ಎಣಿಸಿದ ಹುಡುಗಿ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾಳೆ. ಎಟಿಎಂ ಕೇಂದ್ರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಈಗ ಎಲ್ಲೆಡೆ ಸಖತ್ ಸದ್ದು ಮಾಡ್ತಿದೆ.
10. ಸಿಎಸ್ಕೆ ಮಣಿಸಿದ ರಾಯಲ್ಸ್ ಪಡೆ
ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಪ್ರವೇಶದ ಕನಸು ಜೀವಂತವಾಗಿರಿಸಿಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ರುತುರಾಜ್ ಗಾಯಕ್ವಾಡ್ ಭರ್ಜರಿ ಶತಕದ ನೆರವಿನಿಂದ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿತ್ತು. ಈ ಟಾರ್ಗೆಟ್ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ 3 ವಿಕೆಟ್ ನಷ್ಟಕ್ಕೆ 17.3 ಓವರ್ನಲ್ಲಿ 190 ರನ್ ಗಳಿಸಿ ರೋಚಕ ಜಯ ಗಳಿಸಿದೆ.