ಮುಂಬೈ: ಲೋಕಸಭೆ ಚುನಾವಣೆಯಲ್ಲಿ ನಿತಿನ್ ಗಡ್ಕರಿ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೆಲಸ ಮಾಡಿದ್ದಾರೆ ಎಂದು ಶಿವಸೇನೆ-ಯುಬಿಟಿ ನಾಯಕ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.
ನಾಗ್ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಡ್ಕರಿ ಅವರ ಪ್ರಚಾರ ಮಾಡಲು ಫಡ್ನವೀಸ್ ಗೆ ಇಚ್ಚೆ ಇರಲಿಲ್ಲ. ಆದರೆ, ಕೇಂದ್ರ ಸಚಿವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದಾಗ ಫಡ್ನವೀಸ್ ಇಚ್ಛೆಯಿಲ್ಲದೆ ಪ್ರಚಾರ ಮಾಡಿದ್ದರು ಎಂದು ರಾವತ್ ಆರೋಪಿಸಿದ್ದಾರೆ.
ನಾಗ್ಪುರದಲ್ಲಿ ಗಡ್ಕರಿ ಸೋಲಿಗೆ ಮೋದಿ, ಷಾ ಮತ್ತು ಫಡ್ನವೀಸ್ ಕೆಲಸ ಮಾಡಿದ್ದಾರೆ. ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದಾಗ ಫಡ್ನವಿಸ್ ಇಷ್ಟವಿಲ್ಲದೆ ಪ್ರಚಾರಕ್ಕೆ ಸೇರಿಕೊಂಡರು. ಗಡ್ಕರಿ ಅವರನ್ನು ಸೋಲಿಸಲು ಪ್ರತಿಪಕ್ಷಗಳಿಗೆ ಫಡ್ನವಿಸ್ ಸಹಾಯ ಮಾಡಿದ್ದಾರೆ ಎಂದು ನಾಗ್ಪುರದ ಆರ್ಎಸ್ಎಸ್ ಜನರು ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಲೇಖನದಲ್ಲಿ ರಾವತ್ ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿ ಕ್ಷೇತ್ರದಲ್ಲಿ 25-30 ಕೋಟಿ ರೂ.ಗಳನ್ನು ಹಂಚಿದ್ದಾರೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಅಭ್ಯರ್ಥಿಗಳನ್ನು ಸೋಲಿಸಲು ಅವರ ಆಡಳಿತ ಯಂತ್ರವು ಕೆಲಸ ಮಾಡಿದೆ ಎಂದು ಸೇನಾ-ಯುಬಿಟಿ ನಾಯಕ ಆರೋಪಿಸಿದ್ದಾರೆ.