ಬೆಂಗಳೂರು: ಚಿತ್ರ ಮಂದಿರಗಳಲ್ಲಿ ಶೇ.100 ರಷ್ಟು ಸೀಟು ಭರ್ತಿಗೆ ಮನವಿ ಮಾಡಿ ಕನ್ನಡ ಚಿತ್ರರಂಗದ ನಿರ್ಮಾಪಕರು ಇಂದು ಆರೋಗ್ಯ ಸಚಿವ ಕೆ.ಸುಧಾಕರ್ ಗೆ ಮನವಿ ಮಾಡಿದರು.
ಸದ್ಯದ ಪರಿಸ್ಥಿತಿಯಲ್ಲಿ ನಿರ್ಮಾಪಕರಿಗೆ ತುಂಬಾ ಸಮಸ್ಯೆಗಳಾಗುತ್ತಿವೆ. ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದೊಡ್ಡ ನಟರ ಸಿನಿಮಾಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ. ಆದರೆ, ಶೇ.50ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಿರುವುದರಿಂದ ಸಮಸ್ಯೆಯಾಗುತ್ತಿದೆ. ದೊಡ್ಡ ನಟರ ಸಿನಿಮಾಗಳಿಗೆ ಹೆಚ್ಚು ಹಣಹಾಕಿ ಚಿತ್ರ ಬಿಡುಗಡೆ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗ ಕೋವಿಡ್ ಕಡಿಮೆಯಾಗುತ್ತಿದೆ. ಹಾಗಾಗಿ ಪೂರ್ಣ ಪ್ರಮಾಣದ ಸೀಟು ಭರ್ತಿಗೆ ಅವಕಾಶ ನೀಡುವಂತೆ ನಿರ್ಮಾಪಕರು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು.
ಬಳಿಕ ಮಾತನಾಡಿದ ಸಚಿವ ಸುಧಾಕರ್, ಸಿನಿಮಾ ಮಂದಿರಗಳು ಸದ್ಯಕ್ಕೆ ಶೇ ಐವತ್ತರಷ್ಟು ಭರ್ತಿಗೆ ಮಾತ್ರ ಸದ್ಯಕ್ಕೆ ಅವಕಾಶ ನೀಡಲಾಗಿದೆ. ಈಗ ನಿರ್ಮಾಪಕರು ಭೇಟಿ ಮಾಡಿ ಶೇ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಸಿನಿಮಾ ರಂಗಕ್ಕೆ ಸೇರಿದವರು ಸಾಕಷ್ಟು ನಷ್ಟ ಅನುಭವಿಸುತ್ತಿರುವುದರ ಬಗ್ಗೆ ಅರಿವಿದೆ. ಈಗಾಗಲೇ ತಾಂತ್ರಿಕ ಪರಿಣಿತರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇವೆ. ಇನ್ನೊಂದು ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮಾತನಾಡುತ್ತೇವೆ. ಸಿನಿಮಾ ಮಂದಿರಗಳಿಗೆ ಶೇ. ನೂರರಷ್ಟು ಸೀಟು ಭರ್ತಿಗೆ ಅವಕಾಶ ಸಿಗಬಹುದು ಎಂಬ ಆಶಾಭಾವನೆಯಿದೆ. ಎಲ್ಲದಕ್ಕೂ ತಜ್ಞರ ಸಲಹೆಯೇ ಅಂತಿಮ ಎಂದರು.