‘ಮೈಸೂರು ದಸರಾ’ ಸಂಬಂಧ ಇಂದು ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆ ಬಳಿಕ ಏನೆಲ್ಲಾ ತೀರ್ಮಾನ ಮಾಡಲಾಯಿತು ಅನ್ನೋದ್ರ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.
8 ಆನೆಗಳು ಭಾಗಿ
ವೀರನಹೊಸಹಳ್ಳಿಯಿಂದ ಎಂಟು ಆನೆ ಕರೆ ತರುತ್ತೇವೆ. ಸೆಪ್ಟೆಂಬರ್ 13 ರಂದು ಬೆಳಗ್ಗೆ 9.30ಕ್ಕೆ ಗಜಪಡೆ ಪೂಜೆ, 16 ರಂದು ಅರಮನೆ ಬಳಿ ಗಜಪಡೆ ಸ್ವಾಗತ ನೀಡಲಾಗುತ್ತದೆ. ಅಕ್ಟೋಬರ್ 16 ರಂದು ಗಜಪಡೆ ಬೀಳ್ಕೊಡುಗೆ ನೀಡಲಾಗುತ್ತದೆ.
5 ರಿಂದ 5.36ವರೆಗೆ ಜಂಬೂ ಸವಾರಿ
ಅಗಸ್ಟ್ 7 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಮಾಡಲಾಗುತ್ತದೆ. ಅರಮನೆ ಆವರಣದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ಅಕ್ಟೋಬರ್ 15 ರ ಸಂಜೆ 4.36 ರಿಂದ 4.44 ನಂದಿ ಪೂಜೆ ಇರಲಿದೆ. ಬಳಿಕ ಸಂಜೆ 5 ರಿಂದ 5.36 ಜಂಬೂ ಸವಾರಿ ನಡೆಯಲಿದೆ.
ಅಭಿಮನ್ಯು ಹೆಗಲಿಗೆ ಅಂಬಾರಿ
ಈ ಬಾರಿಯೂ ಅಭಿಮನ್ಯು ಅಂಬಾರಿಯನ್ನ ಹೊರಲಿದ್ದಾನೆ. ತನ್ನ ತಂಡದೊಂದಿಗೆ ಕ್ಯಾಪ್ಟನ್ ಅಭಿಮನ್ಯು ಬರಲಿದ್ದು, ಜಂಬೂ ಸವಾರಿಯಲ್ಲಿ 8 ಆನೆಗಳು ಸೇರಲಿವೆ. ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆಗೆ ಸ್ಥಾನ ನೀಡಲಾಗಿದೆ. ಮೈಸೂರಿನಾದ್ಯಂತ ಅಕ್ಟೋಬರ್ 7ರಿಂದ 15 ವರೆಗೆ ದೀಪಾಲಂಕಾರ ಇರಲಿದೆ. ಕ್ಯಾಪ್ಟನ್ ಅಭಿಮನ್ಯು, ಗೋಪಾಲಸ್ವಾಮಿ, ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮಿ ಭಾಗವಹಿಸಲಿವೆ.
ಗಜಪಡೆ ನಿರ್ವಹಣೆಗೆ ₹50 ಲಕ್ಷ ಘೋಷಣೆ
ಇದೇ ಪ್ರಥಮವಾಗಿ 34 ವರ್ಷದ ಅಶ್ವತ್ಥಾಮ ದಸರಾಗೆ ಎಂಟ್ರಿ ನೀಡಲಿದೆ. ಕಿರಿಯ ಆನೆಯಾಗಿ ಲಕ್ಷ್ಮೀ ಎರಡನೇ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿದ್ದಾಳೆ. ಗಜಪಡೆ ನಿರ್ವಹಣೆಗೆ 50 ಲಕ್ಷ ರೂಪಾಯಿ ನೀಡಲಾಗುವುದು. 9 ದಿನವೂ ಅರಮನೆ ಒಳಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂಜನಗೂಡಿನ ದೇವಸ್ಥಾನದೊಳಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಚಾಮುಂಡೇಶ್ವರಿ ಉತ್ಸವಮೂರ್ತಿ ದರ್ಶನಕ್ಕೆ ಅವಕಾಶ
ಅಕ್ಟೋಬರ್ 15 ರಂದು ಜಂಬೂ ಸವಾರಿ ನಡೆಯಲಿದೆ. ಈ ಬಾರಿ ನಗರದ ಒಳಗೆ 100 ಕಿ.ಮೀ ದೀಪಾಲಂಕಾರ ನಡೆಯಲಿದೆ. ಒಟ್ಟು 157 ವೃತ್ತಗಳಲ್ಲಿ ದೀಪಾಲಂಕಾರ ಇರಲಿದೆ. 3 ಸ್ಥಬ್ದಚಿತ್ರಗಳಿಗೆ ಮಾತ್ರ ಈ ಬಾರಿ ಅವಕಾಶ ಸಿಗಲಿದೆ. ಚಾಮುಂಡಿ ಉತ್ಸಹ ಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ಅರಮನೆಗೆ ಮೆರವಣಿಗೆ ಮೂಲಕ ತರಲಾಗುವುದು. ಎಲ್ಲರೂ ನಾಡದೇವತೆ ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿ ದರ್ಶನಕ್ಕೆ ಅವಕಾಶ ನೀಡಲಾಗುವುದು. ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಹೆಚ್ಚು ಜನರಿಗೆ ಅವಕಾಶ ಕೊಡಲು ಮುಂದಿನ ದಿನಗಳಲ್ಲಿ ಕೇಳುತ್ತೇವೆ ಎಂದರು.