ಬೆಂಗಳೂರು, ಏಪ್ರಿಲ್ 30: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಹಳೆಯದು ಎಂದು ಹೇಳಿದ್ದಾರೆ. ಹಾಗಾದರೆ ಚುನಾವಣೆ ಹೊತ್ತಲ್ಲಿ ಎಳೆದು ತಂದವರು ಯಾರು, ಆ ಮಹಾನಾಯಕನ ಕೈಗೆ ಪೆನ್ಡ್ರೈವ್ ಸಿಕ್ಕಿದ್ದು ಹೇಗೆ? ಇದಕ್ಕೆಲ್ಲ ಅವರೇ ಕಾರಣ. ಕಾಂಗ್ರೆಸ್ ಪುಡಾರಿಗಳು ನನ್ನ ಮನೆ ಮುಂದೆ ಪ್ರತಿಭಟನೆ ಮಾಡುವ ಅವಶ್ಯಕತೆ ಇದಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಎಚ್ಡಿ ಕುಮಾರಸ್ವಾಮಿ ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಜೆಡಿಎಸ್ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಎಚ್ಡಿ ಕುಮಾರಸ್ವಾಮಿಯವರು ಪಜ್ವಲ್ ರೇವಣ್ಣ ಪ್ರಕರಣ ಕುರಿತ ಹಲವು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಪೆನ್ಡ್ರೈವ್ ಪ್ರಕರಣ ಹಳೆಯದ್ದು ಎಂದು ಹೇಳಿದ್ದಾರೆ. ಚುನಾವಣೆ ಹೊತ್ತಲ್ಲಿ ಹೊರ ಬರಲು ಕಾರಣವೇನು?. ಪೆನ್ಡ್ರೈವ್ ಕಾಂಗ್ರೆಸ್ನ ಆ ‘ಮಹಾನಾಯಕ’ ಡಿಸಿಎಂ ಡಿಕೆ ಶಿವಕುಮಾರ್ ಕೈಗೆ ಸೇರಿದ್ದು ಹೇಗೆ?. ಇದನ್ನು ಬಹಿರಂಗ ಪಡಿಸುವ ಮೂಲಕ ದುರುದ್ದೇಶ ರಾಜಕಾರಣ ಮಾಡಲಾಗುತ್ತಿದೆ ಎಂದರು.
ಒಂದು ವಾರದಿಂದ ಪೆನ್ಡ್ರೈವ್ ವಿಚಾರದಲ್ಲಿ ಅವರು ನಡೆದುಕೊಂಡಿರುವ ಬಗ್ಗೆ ನನಗೆ ಗೊತ್ತಿದೆ. ಇದಕ್ಕೆ ತಕ್ಕ ಉತ್ತರ ಕೊಡುತ್ತೇನೆ. ಪ್ರಕರಣ ಕುರಿತು ವಿವರವಾಗಿ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ಸದ್ಯ ಸರ್ಕಾರ ಪೆನ್ಡ್ರೈವ್ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದೆ. ತನಿಖೆಗೆ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ನಮ್ಮ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ಅವರು ಹೇಳಿದರು.