ಚಿಕ್ಕೋಡಿ(ಬೆಳಗಾವಿ): ದೇಶಿ ಸಂಸ್ಕೃತಿ ಮರೆಯಾಗುತ್ತಿರುವ ಸಂದರ್ಭದಲ್ಲಿ ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ವತಿಯಿಂದ “ಜವಾರಿ ಊಟ, ಹಳ್ಳಿ ನೋಟ” ಎಂಬ ವಿನೂತನ ಕಾರ್ಯಕ್ರಮವನ್ನು ರವಿವಾರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರ್ರಮದಲ್ಲಿ ಹಳ್ಳಿ ಸೊಗಡನ್ನ ಅನುಭವಿಸುವ ನಿಟ್ಟಿನಲ್ಲಿ ಮಹಿಳೆಯರು ಇಳಕಲ್ ಸೀರೆ ಹಾಗೂ ಪುರುಷರು ಹಳೆ ಕಾಲದ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಪುರುಷರು ಚಿನ್ನಿದಾಂಡು, ಕುಂಟಾಟ, ಕುಂಟಾಬಿಲ್ಲೆ, ಖೋ ಖೋ, ಹಗ್ಗ ಜಗ್ಗಾಟ, ಕೊಡ ಹೊತ್ತ ನಾರಿಯರ ಓಟದ ಸ್ಪರ್ಧೆ, ಹಂತಿ, ರಾಶಿ, ಬೀಸು ಕಲ್ಲಿನ ಪದಗಳು, ಗ್ರಾಮೀಣ ಪ್ರದೇಶದ ಊಟೋಪಚಾರ, ಗುರು ಹಿರಿಯರನ್ನು ಸತ್ಕರಿಸಿ ಗೌರವಿಸುವ ಪದ್ಧತಿ ಮೊದಲಾದ ಸ್ಪರ್ಧೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸಪಟ್ಟರು
ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ್ ಪುರಸಭೆ ಸದಸ್ಯ ಆರ್.ಕೆ.ಪಾಟೀಲ್, ತಮ್ಮಣ್ಣಗೌಡ ಪಾಟೀಲ್, ಶಂಕರ ನಾಯಿಕ, ವರ್ತಕರಾದ ಸೋಮಣ್ಣಾ ಪಟ್ಟಣಶೆಟ್ಟಿ, ಚಿದಾನಂದ ಬೆಲ್ಲದ, ಹಿರಾ ಶುರ್ಸ್ ಕಾರ್ಯಾಲಯ ಅಧೀಕ್ಷಕ ಎಸ್.ಆರ್ ಕರ್ಕಿನಾಯಿಕ, ಪತ್ರಕರ್ತರಾದ ಬಾಬು ಸುಂಕದ, ರಾಮಣ್ಣಾ ನಾಯಿಕ, ರಾಜು ಬಾಗಲಕೋಟೆ, ಸಂಜೀವ ಮುತಾಲಿಕ, ಬಸವರಾಜ ಕೊಂಡಿ ಮತ್ತಿತರರಿದ್ದರು.