ಮೈಸೂರು, ಏ.7- ಕೊರೊನಾ ಅಟ್ಟಹಾಸದಿಂದ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ವಾರಂಟೈನ್ಗೆ ಒಳಪಡುವವರ ಸಂಖ್ಯೆ ಕಡಿಮೆಯಾಗಿದ್ದರೂ ಈಗಾಗಲೇ ಕ್ವಾರಂಟೈನ್ಗೆ ಒಳಪಟ್ಟಿರುವವರು ಹಾಗೂ ವಿದೇಶದಿಂದ ಬಂದವರಲ್ಲಿ 1533 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ.
ದೆಹಲಿ ಹಾಗೂ ಜ್ಯುಬಿಲಿಯಂಟ್ ಕಾರ್ಖಾನೆ ಸಿಬ್ಬಂದಿಯೇ ಹೆಚ್ಚಾಗಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಒಟ್ಟಾರೆ 1334 ಮಂದಿಯನ್ನು ಹೋಂ ಕ್ವಾರಂಟೈನ್ನಲ್ಲಿರಿಸಲಾಗಿದೆ. ಇವರ ಪೈಕಿ 287 ಮಂದಿಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 35 ಮಂದಿಗೆ ಪಾಸಿಟೀವ್ ಬಂದರೆ ಉಳಿದವರದ್ದು ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನುಳಿದಂತೆ ಮೂವರ ರಿಪೋರ್ಟ್ ಬಂದಿಲ್ಲ. ಅಲ್ಲದೆ, ನಾಲ್ಕು ಮಂದಿಯ ಸ್ಯಾಂಪಲ್ಗಳನ್ನು ಮರು ಪರೀಕ್ಷೆಗೊಳಪಡಿಸಲಾಗಿದ್ದು, ಒಟ್ಟಾರೆ 70 ಮಂದಿಯ ಲ್ಯಾಬ್ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ.
# ಸೋಂಕು ತಡೆಗೆ ಪಾಲಿಕೆ ಮಹತ್ತರ ಹೆಜ್ಜೆ, ಪೌರ ಕಾರ್ಮಿಕರಿಗೆ ನೂತನ ವಸ್ತ್ರ :
ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಮಹತ್ತರ ಹೆಜ್ಜೆ ಇಟ್ಟಿದ್ದು, ಹೋಂ ಕ್ವಾರಂಟೈನ್ನಲ್ಲಿರುವವರ ಮನೆಯಿಂದ ಕಸ ಸಂಗ್ರಹಕ್ಕೆ ತೆರಳುವ ಪೌರ ಕಾರ್ಮಿಕರಿಗೆ ನೂತನ ವಸ್ತ್ರ ನೀಡಿದೆ.
ನಗರದಲ್ಲಿ ಕ್ವಾರಂಟೈನ್ ಮನೆಗಳನ್ನು ಗುರುತಿಸಲಾಗಿದ್ದು, ಅಂತಹವರ ಮನೆಗಳ ಕಸ ಸಂಗ್ರಹಿಸುವ ಪೌರ ಕಾರ್ಮಿಕರು ಪಾಲಿಕೆ ನೀಡಿರುವ ವಸ್ತ್ರವನ್ನೇ ಧರಿಸಿ ಪ್ರತ್ಯೇಕವಾಗಿ ಕಸ ಸಂಗ್ರಹಿಸಬೇಕು. ಅಲ್ಲದೆ, ಮನೆಗಳಿಗೆ ಪ್ರತಿದಿನ ಔಷಧಿ ಸಿಂಪಡಿಸಬೇಕು ಎಂದು ಪಾಲಿಕೆ ತಿಳಿಸಿದೆ.
ಮೈಸೂರಿನಲ್ಲಿ 65 ವಾರ್ಡ್ಗಳಿಂದ ಎಂಟು ಜೋನ್ಗಳಿದ್ದು, ಪ್ರತಿ ಜೋನ್ಗಳಿಗೆ ಇಬ್ಬರು ಸಿಬ್ಬಂದಿಯನ್ನು ನೇಮಿಸಲಾಗಿದೆ. ಅಂತಹವರು ಸಂಪೂರ್ಣ ಮಾಸ್ಕ್ ಧರಿಸಿ ಗ್ಲೌಸ್ ಹಾಗೂ ಲಾಂಗ್ ಕೋಟ್ ಧರಿಸಿಯೇ ಅಂತಹವರ ಮನೆಗಳಿಗೆ ಹೋಗಿ ಕಸ ಸಂಗ್ರಹಿಸಬೇಕು ಎಂದು ಪಾಲಿಕೆ ಸೂಚಿಸಿದೆ