ಬೆಂಗಳೂರು,ಏ.7- ರಾಜ್ಯದ 49 ಬರಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗಾಗಿ ತಾಲ್ಲೂಕಿಗೆ ತಲಾ ಒಂದು ಕೋಟಿ ರೂ ಅನುದಾನ ಒದಗಿಸಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಗ್ರಾಮ ಪಂಚಾಯ್ತಿಗಳಲ್ಲಿ ಕೊರೋನಾ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ.
ಗ್ರಾಮಗಳಲ್ಲೂ ಸಮಿತಿಗಳನ್ನು ಮಾಡಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ನರೇಗಾ ಯೋಜನೆಯಲ್ಲಿ ಕೇಂದ್ರದಿಂದ 1,861 ಕೋಟಿ ರೂ ಹಣ ಬಿಡುಗಡೆ ಆಗಿದೆ. ಇದರಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ 1,039 ಕೋಟಿ ರೂ ಬಾಕಿ ಹಣ ಕೊಡಬೇಕಿದೆ.
ರಾಜ್ಯ ಸರ್ಕಾರದಿಂದಲೂ 257 ಕೋಟಿ ರೂ ಅನುದಾನ ಇದೆ. ಹಿಂದೆ ಕೆಲವರಿಗೆ ಕೂಲಿ ಮತ್ತು ಸಲಕರಣೆಗಳ ಬಿಲ್ ಬಾಕಿ ಇತ್ತು. ಎಲ್ಲವನ್ನೂ ಪಾವತಿಸಿದ ಬಳಿಕ 1077 ಬಾಕಿ ಹಣ ಉಳಿಯಲಿದೆ ಎಂದರು. ರಾಜ್ಯದಲ್ಲಿ ಒಬ್ಬ ಕೂಲಿ ಕಾರ್ಮಿಕನಿಗೆ 275 ರೂ ವರೆಗೆ ಕೂಲಿ ಹೆಚ್ಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಉಳಿಕೆ ನರೇಗಾ ಹಣದ ಬಳಕೆ ಮಾಡಿಕೊಳ್ತೇವೆ. ಕೊರೋನಾದಿಂದಾಗಿ ನರೇಗಾ ಕೂಲಿ ಹಣದಲ್ಲಿ ಹೆಚ್ಚಳ ಆಗಿದೆ. ಇನ್ನು ಮುಂದೆ ನರೇಗಾ ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದು.ನರೇಗಾ ಕೂಲಿ ಕಾರ್ಮಿಕರನ್ನು ಸಾಮಾಜಿಕ ಅಂತರ ಅನುಸರಿಸಿ ದುಡಿಮೆ ಮಾಡಿಸುತ್ತೇವೆ. ಕೊರೋನಾದಿಂದ ಸಂಕಷ್ಟಕ್ಕೊಳಗಾಗಿರುವ ಕೂಲಿ ಕಾರ್ಮಿಕರಿಗೆ ನೆರವಾಗಲಿದೆ ಎಂದರು
# ಜನಪ್ರತಿನಿಧಿಗಳ ವೇತನ ಕಡಿತಕ್ಕೆ ಬೆಂಬಲವಿದೆ :
ಜನಪ್ರತಿನಿಧಿಗಳ ವೇತನದಲ್ಲಿ ಕಡಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲೂ ಸಹ ಮುಖ್ಯಮಂತ್ರಿ ಈ ಬಗ್ಗೆ ಹೇಳಿದ್ದಾರೆ. ಜನಪ್ರತಿನಿಧಿಗಳ ವೇತನದಲ್ಲಿ ಕಡಿತ ಮಾಡಿದರೆ ನಮ್ಮೆಲ್ಲರ ಬೆಂಬಲ ಇರಲಿದೆ. ಮುಖ್ಯಮಂತ್ರಿ ಏನೇ ನಿರ್ಧಾರ ಕೈಗೊಂಡರೂ ನಮ್ಮ ಬೆಂಬಲ ಇರಲಿದೆ.
ನಾನು ಈಗಾಗಲೇ ನನ್ನ ನಾಲ್ಕು ತಿಂಗಳ ವೇತನ ನೀಡಿದ್ದೇನೆ ಎಂದರು. ಗ್ರಾಮೀಣ ಜನರ ಸಮಸ್ಯೆಗಳಿಗೆ ಸಚಿವ ಈಶ್ವರಪ್ಪ ಸ್ಪಂದಿಸ್ತಿಲ್ಲ, ಎಲ್ಲಿ ಮಲಗಿದ್ದಾರೋ ಎಂಬ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಟೀಕೆಗೆ ಪ್ರತಿಕ್ರಿಯಿಸಿದ ಅವರು ಸುದ್ದಿಗೋಷ್ಟಿ ಕರೀತಾರೆ ಅನ್ನೋ ಕಲ್ಪನೆ ಸಹ ನನಗೆ ಇರಲಿಲ್ಲ. ರಾಜಕೀಯ ಮಾಡಲ್ಲ ಅಂತ ಹೇಳಿ ರಾಜಕೀಯ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
# ನಾನು ರಾಜಕೀಯ ಮಾಡಲು ಸುದ್ದಿಗೋಷ್ಟಿ ಕರೆದಿಲ್ಲ :
ನಾನು ಎಲ್ಲಿ ಮಲಗಿದೀನಿ ಅಂತ ಡಿಕೆಶಿ ನೋಡಲಿ ಎಂದ ಅವರು, ನಾನು ಎರಡು ಮೂರು ಜಿಲ್ಲೆಗಳ ಉಸ್ತುವಾರಿ ನೋಡಬೇಕಿದೆ. ನಾನೇನು ಸುಮ್ನೆ ಕೂತಿಲ್ಲ, ಜಿಲ್ಲೆಗಳಿಗೆ ಭೇಟಿ ಮಾಡಿ ಪರಿಶೀಲನೆ ಮಾಡ್ತಿದ್ದೇನೆ ಎಂದರು.
ವಿರೋಧ ಪಕ್ಷದವರಾಗಿ ಡಿಕೆಶಿ ನನಗೇ ಕರೆ ಮಾಡಿ ಕೇಳಬಹುದಿತ್ತು. ಡಿಕೆಶಿ ಪ್ರಸ್ತಾಪ ಮಾಡಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಂಡಿದ್ದೇವೆ. ಜನರ ಸಮಸ್ಯೆಗಳಿಗೆ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ. ನಮ್ಮ ಕೆಲಸ, ಕರ್ತವ್ಯ ನಾವು ಮಾಡ್ತಿದ್ದೇವೆ. ಅವರ ಕೆಲಸ ಅವರು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಬಗ್ಗೆ ಸರ್ಕಾರದಿಂದ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಸರ್ಕಾರದ ಸುಗ್ರೀವಾಜ್ಞೆ ಗೆ ರಾಜ್ಯಪಾಲರ ಒಪ್ಪಿಗೆ ಸಿಕ್ಕಿದೆ. ಕೊರೋನಾ ಸಮಸ್ಯೆ ಮುಗಿದ ಬಳಿಕ ಹೊಸ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆಯನ್ವಯ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೂ ಮನವಿ ಮಾಡಲಾಗಿದೆ ಎಂದರು.