ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾ ವೈರಾಣುವಿನ ವಿರುದ್ಧ
ಸರಕಾರ ಮತ್ತು ಸಮಾಜದ ಜಂಟೀ ಹೋರಾಟದ ಅಗತ್ಯವಿದ್ದು ಪ್ರತಿಯೊಬ್ಬ ನಾಗರಿಕರಿಗೆ ಅವರದೇ ಆದ ಹೊಣೆಗಾರಿಕೆ ಇದೆ.ಎಲ್ಲವನ್ನೂ ಸರಕಾರವೇ ಮಾಡಬೇಕು ಎಂಬ ಭಾವನೆ ಸರಿಯಲ್ಲ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಇಂದು ಮಧ್ಯಾನ್ಹ ಬೆಳಗಾವಿ ಸಮೀಪದ ಕಣಬರ್ಗಿಯಲ್ಲಿ ಹೇಳಿದರು.
ಕಳೆದ ಮಾರ್ಚ 20 ರಿಂದ ಕ್ರಿಯಾ ಸಮಿತಿಯು ಆರಂಭಿಸಿರುವ ” ಹಸಿದವರತ್ತ ನಮ್ಮ ಚಿತ್ತ” ಅಭಿಯಾನದ ಅಂಗವಾಗಿ 27 ವಿಧವೆಯರ ಕುಟುಂಬಗಳಿಗೆ ಆಹಾರಧಾನ್ಯ ಚೀಲಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಬೆಳಗಾವಿಯ ಎರಡು ಪ್ರಸಿದ್ಧ ಮಠಗಳಾದ ನಾಗನೂರು ರುದ್ರಾಕ್ಷಿ ಮಠ ಮತ್ತು ಹುಕ್ಕೇರಿಮಠಗಳ ಡಾ.ಅಲ್ಲಮಪ್ರಭು ಮಹಾಸ್ವಾಮೀಜಿ ಮತ್ತು ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಅವರುಗಳ ಬೆಂಬಲ,ಪ್ರೋತ್ಸಾಹದಿಂದ ಮತ್ತು ಅನೇಕ ದಾನಿಗಳ ಸಹಕಾರದಿಂದ ಒಂದು ತಿಂಗಳಿಂದ ಈ ಅಭಿಯಾನವನ್ನು ಕೈಕೊಂಡಿದ್ದು ಸುಮಾರು 800 ಕ್ಕೂ ಅಧಿಕ ಕುಟುಂಬಗಳಿಗೆ ಅಕ್ಕಿ,ಗೋಧಿ,ಜೋಳದ ಹಿಟ್ಟು,ಎಣ್ಣೆ,ಸಕ್ಕರೆ,ಚಹಾಪುಡಿ,ತೊಗರೆ ಬೇಳೆ,ಜೀರಿಗೆ,ಸಾಸಿವೆ,ಸಾಬೂನುಗಳನ್ನು ವಿತರಿಸಲಾಗಿದೆ ಎಂದರು.
ಸರಕಾರ ಪೂರೈಸುವ ಅಕ್ಕಿಯ ಜೊತೆಗೆ ಅವಶ್ಯವಿರುವ ತೊಗರೆ ಬೇಳೆ,
ಎಣ್ಣೆ,ಗೋಧಿ,ಜೋಳದ ಹಿಟ್ಟನ್ನು ಒದಗಿಸಲಾಗಿದೆ.ಹೆಚ್ಚೆಚ್ಚು ದಾನಿಗಳು ಬಡವರ ನೆರವಿಗೆ ಬರಬೇಕು.ಇದೊಂದು ಜಂಟೀ ಪ್ರಯತ್ನವೇ ಹೊರತು ಏಕವ್ಯಕ್ತಿ ಅಥವಾ ಒಂದೆರಡು ಸಂಸ್ಥೆಗಳ ಕೆಲಸವಾಗಬಾರದು.ಮಾನವಿಯತೆಯ ಪ್ರವಾಹವೇ ಹರಿದು ಬರಬೇಕು.ಹಸಿವೆಯಿಂದ ಯಾರೂ ಬಳಲಬಾರದು ಎಂದೂ ಅಶೋಕ ಚಂದರಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ನಗರಸೇವಕ ಭೈರಗೌಡ ಪಾಟೀಲ,ಶಂಕರ ಬಾಗೇವಾಡಿ,ಮುರಗೇಂದ್ರಗೌಡ ಪಾಟೀಲ, ರಾಜು ಮೀಸಿ,ಅಂಜನಕುಮಾರ ಗಂಡಗುದರಿ,ಸಿದಗೌಡ ಪಾಟೀಲ,ರಾಜೂ
ಖಡಕಭಾವಿ,ಗಣಪತಿಗೌಡ ಪಾಟೀಲ,ಹರೀಶ ಕರಿಗೊಣ್ಣವರ,ವಿರೇಂದ್ರ ಗೋಬರಿ,ಆನಂದ ಹುಲಮನಿ ,ಸಂದೀಪ ಮುಂತಾದವರು
ಉಪಸ್ಥಿತರಿದ್ದರು.