ರಾಯಚೂರು: ಕೊರೊನಾ ಸೋಂಕಿತ ರೋಗಿಯನ್ನು ಅಂಬುಲೆನ್ಸ್ ನಲ್ಲಿ ಇರಿಸಿ ಅದೇ ವ್ಯಾನಿನಲ್ಲಿ ಅನಗತ್ಯವಾಗಿ ತಿರುಗಾಡುವವರನ್ನು ಹಾಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೇ ಮಾದರಿಯಲ್ಲಿ ಇಂದು ರಾಯಚೂರು ಜಿಲ್ಲಾ ಪೊಲೀಸರು ಸಹ ಅನಗತ್ಯವಾಗಿ ತಿರುಗಾಡುವವರಿಗೆ ಶಿಕ್ಷೆ ನೀಡಿದ್ದಾರೆ.
ಗ್ರೀನ್ ಜೋನಿನಲ್ಲಿರುವ ರಾಯಚೂರಿನಲ್ಲಿ ಲಾಕ್ಡೌನ್ನ್ನು ಒಂದಿಷ್ಟು ಸಡಿಲಿಕೆ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ತ್ರಿಬ್ಬಲ್ ರೈಡ್ ಹೋಗುತ್ತಿದ್ದಾರೆ. ಕೆಲವರು ಅನಾವಶ್ಯಕವಾಗಿ ಹೊರಗಡೆ ತಿರುಗಾಡುತ್ತಿದ್ದರು. ಇಂಥವರನ್ನು ನಗರದ ಚಂದ್ರಮೌಳೇಶ್ವರ ವೃತ್ತ ಹಾಗೂ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪೊಲೀಸರು ಹಿಡಿದು ಅಂಬುಲೆನ್ಸ್ ನಲ್ಲಿ ಹಾಕಿದ್ದಾರೆ.
ಜೊತೆಗೆ ಪೊಲೀಸ್ ಸಿಬ್ಬಂದಿಯೇ ರೋಗಿಯಂತೆ ಅಂಬುಲೆನ್ಸ್ ನಲ್ಲಿ ಮಲಗಿ ಹೆದರಿಸುವ ಮೂಲಕ ಅನಗತ್ಯವಾಗಿ ಹೊರಬರುವವರಿಗೆ ಬುದ್ಧಿ ಕಲಿಸಲಾಗುತ್ತಿದೆ. ಅಲ್ಲದೆ ಅಂಬುಲೆನ್ಸ್ ಶಿಕ್ಷೆ ಬಳಿಕ ವಶಕ್ಕೆ ಪಡೆದವರ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಇಡೀ ದಿನ ಠಾಣೆಯಲ್ಲಿ ಕುಳಿತುಕೊಳ್ಳುವ ಶಿಕ್ಷೆ ನೀಡಿದ್ದಾರೆ. ಕೊರೊನಾ ತಡೆಗಾಗಿ ಸಾಮಾಜಿಕ ಅಂತರಕ್ಕಾಗಿ ಜನರು ಹೊರಬರದಂತೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಜನರು ಸಹ ಸಹಕರಿಸಬೇಕೆಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮನವಿ ಮಾಡಿಕೊಂಡಿದ್ದಾರೆ.