ವಿಜಯಪುರ: ವಿಜಯಪುರ ನಗರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basanagouda Patil Yatnal) ನಿನ್ನೆ ಪ್ರಕಟಗೊಂಡ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ (Vijayapura Corporation Result) ವಿಚಾರವಾಗಿ ಮಾತನಾಡಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇಡೀ ಕರ್ನಾಟಕ ವಿಧಾನಸಭಾ ಚುನಾವಣೆ (Assembly Elections 2023) ಮೇಲೆ ಪರಿಣಾಮ ಬೀರುತ್ತದೆ. ರಾಜಕಾರಣದ ವಾತಾವರಣ ಬದಲಾವಣೆಯಾಗುತ್ತಿದೆ. ಎಲ್ಲರ ವಿಶ್ವಾಸ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ವಿಜಯಪುರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಪಾಲಿಕೆಯಲ್ಲಿ ಇದುವರೆಗೆ ಯಾವ ಪಕ್ಷವೂ ಇಷ್ಟು ಸ್ಥಾನ ಗೆದ್ದಿರಲಿಲ್ಲ. 35 ಸ್ಥಾನಗಳ ಪೈಕಿ ಬಿಜೆಪಿ 17 ಸ್ಥಾನಗಳನ್ನು ಗೆದ್ದಿದೆ. ಕಳೆದ ಬಾರಿಗಿಂತ ಈ ಬಾರಿ ನಾವು ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ಅಭಿವೃದ್ಧಿ ಹಾಗೂ ಹಿಂದುತ್ವವನ್ನು ಜನ ಒಪ್ಪಿದ್ದಾರೆ ಎಂದ ಯತ್ನಾಳ್ ಕಡಿಮೆ ಮತಗಳ ಅಂತರದಿಂದ ಮೂರು ಸ್ಥಾನಗಳಲ್ಲಿ ಸೋತಿದ್ದೇವೆ. ಬಿಜೆಪಿ ಗೆಲುವಿನ ಬಗ್ಗೆ ಸಿಎಂ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಕೆಲವು ಲೀಡರ್ಗಳು ಮನೆಯಲ್ಲಿ ಕುಳಿತು ಕುತಂತ್ರ ಮಾಡಿದ್ದರು. ಕಾಂಗ್ರೆಸ್, ಬಿಜೆಪಿಯಲ್ಲಿ ಕೆಲ ಕಳ್ಳರ ಗ್ಯಾಂಗ್ ಇದೆ. ಬೆಂಗಳೂರು, ಮುಧೋಳದಿಂದ ಸಾಕಷ್ಟು ಸಹಾಯಹಸ್ತ ಬಂದಿತ್ತು. ನನ್ನನ್ನು ಮಣಿಸಬೇಕು ಅಂದುಕೊಂಡವರಿಗೆ ಜನ ಉತ್ತರ ಕೊಟ್ಟಿದ್ದಾರೆ. ಇನ್ನು ಮೇಲಾದರೂ ನಿವೃತ್ತಿಯಾಗಿ ಮನೆಯಲ್ಲಿ ಆರಾಮವಿರಬೇಕು ಅಂತಹವರು ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾರ್ಮಿಕವಾಗಿ ಹೇಳಿದ್ದಾರೆ.