ಹಾವೇರಿ: ‘ಕೈ ಮುಗಿದು ಏರು ಇದು ಕನ್ನಡದ ತೇರು’ ಎಂದು ಬಸ್ ಪ್ರಯಾಣಿಕರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದೆ ‘ಕನ್ನಡ ರಥ’ವಾಗಿ ಪರಿವರ್ತನೆಗೊಂಡಿರುವ ಸಾರಿಗೆ ಬಸ್.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ, ಹಿರೇಕೆರೂರು ಘಟಕದ ‘ಶ್ರೀ ದುರ್ಗಾ ಎಕ್ಸ್ಪ್ರೆಸ್’ ಎಂಬ ಹೆಸರಿನ ಬಸ್ ಮಧುವಣಗಿತ್ತಿಯಂತೆ ಕನ್ನಡ ರಾಜ್ಯೋತ್ಸವಕ್ಕಾಗಿ ವಿಶಿಷ್ಟವಾಗಿ ಅಲಂಕೃತಗೊಂಡಿದೆ.
ಪ್ರಯಾಣಿಕರಲ್ಲಿ ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತಿದೆ.
ಬಸ್ ಮುಂಭಾಗದಲ್ಲಿ ಕನ್ನಡಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಿಂಭಾಗದಲ್ಲಿ ‘ಕರುನಾಡ ಕನ್ನಡಿಗ’ ಎಂಬ ನಾಮಫಲಕ ಹಾಗೂ ಭುವನೇಶ್ವರಿ, ಶಿವಾಜಿ ಮತ್ತು ಭಗತ್ಸಿಂಗ್ರ ಭಾವಚಿತ್ರಗಳು ರಾರಾಜಿಸುತ್ತಿವೆ. ಬಲಬದಿಯಲ್ಲಿ ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಹಾಗೂ ಮತ್ತೊಂದು ಬದಿಯಲ್ಲಿ ‘ಸರ್ವಜ್ಞನ ನಾಡು ಹಿರೇಕೆರೂರಿನಿಂದ ಚನ್ನಮ್ಮನ ನಾಡು ಬೆಳಗಾವಿ…’ ಎಂಬ ಅಕ್ಷರಗಳು ಗಮನಸೆಳೆಯುತ್ತವೆ.
ರಥದ ವಿಶೇಷತೆಗಳು:
ಜಿಲ್ಲೆಯ ಪ್ರಮುಖ ಪ್ರೇಕ್ಷಣಿಯ ಸ್ಥಳಗಳು, ಪ್ರಮುಖ ನದಿಗಳು, ದೊರೆಯುವ ಖನಿಜಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು, ಕನ್ನಡ ನುಡಿಮುತ್ತುಗಳು, ಸ್ವಾತಂತ್ರ್ಯ ಹೋರಾಟಗಾರರು, ಕವಿಗಳು, ಸಂತರು, ದಾರ್ಶನಿಕರ ಭಾವಚಿತ್ರಗಳು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಗಳ ವಿವರಗಳನ್ನು ಬಸ್ ಹೊರಗಡೆ ಮತ್ತು ಒಳಗಡೆ ಅಂಟಿಸಲಾಗಿದೆ. ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ ಭಾವಚಿತ್ರ ಕಂಗೊಳಿಸುತ್ತಿದೆ.