ಬೆಂಗಳೂರು, ಮಾ.16- ಮಾರ್ಚ್ 4ರಿಂದ ಪ್ರಾರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆ ಈವರೆಗೆ ಸುಲಲಿತವಾಗಿ ನಡೆದಿದ್ದು, ಇನ್ನೂ ಏಳು ದಿನಗಳ ಕಾಲ ನಡೆಯಲಿರುವ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಎದುರಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ ಹೇಳಿದ್ದಾರೆ.
ಈಗಾಗಲೇ 39 ವಿಷಯಗಳ ಪರೀಕ್ಷೆ ಮುಗಿದಿದೆ. ಇನ್ನೂ 7 ಪರೀಕ್ಷೆಗಳು ನಡೆಯಬೇಕಿದೆ. ವಿದ್ಯಾರ್ಥಿಗಳು ನಿರ್ಭಯದಿಂದ ಪರೀಕ್ಷೆ ಬರೆಯಿರಿ. ವಿಜಯಪುರದಲ್ಲಿ ಯಾರೋ ಇಬ್ಬರು ಕಿಡಿಗೇಡಿಗಳು ಮಾಡಿದ ಕೃತ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಕೆಲವು ವದಂತಿ ಹಬ್ಬಿದ್ದನ್ನು ಬಿಟ್ಟರೆ ಇನ್ನು ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬರದ ರೀತಿಯಲ್ಲಿ ನಿರ್ವಹಿಸಿದೆ ಎಂದು ಹೇಳಿದರು.
ಉಪನ್ಯಾಸಕರೇ ನಿಮ್ಮ ಮೌಲ್ಯಮಾಪಕರಾದ ಕಾರಣ ಅವರು ನಿಮ್ಮ ಹಿತ ಕಾಯುತ್ತಾರೆ. ಮೌಲ್ಯಮಾಪನ ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿದ್ದು ಬೇಸರ ಮತ್ತು ಆತಂಕ ಮೂಡಿಸಿದೆ. ಅವರ ಹಿತವನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಉಪನ್ಯಾಸಕರ ಸಂಘಗಳ ಬೇಡಿಕೆ, ಸರ್ಕಾರಗಳ ತಿಕ್ಕಾಟದ ನಡುವೆ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು.
ನಾನು ಉಪನ್ಯಾಸಕರ ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಅವರ ಈಡೇರಿಸಬಹುದಾದ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ ಎಂದು ಹೇಳಿದರು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಅವರು ತಿಳಿಸಿದ್ದಾರೆ.