ಗೋಕಾಕ : ‘ ಮೂಢನಂಬಿಕೆ ವಿರುದ್ಧ ಅಂಬೇಡ್ಕರ್, ಬಸವಣ್ಣನವರು ಸೇರಿ ಎಲ್ಲ ಮಹಾ ನಾಯಕರು ಹೋರಾಟ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನೀವು, ನಾವೇಲ್ಲ ಮುನ್ನಡೆಯಬೇಕು ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮಾಜದ ಸೇವಾ ಸಮಿತಿ ಆಯೋಜಿಸಿದ್ದ ಗೋಕಾಕ್, ಮೂಡಲಗಿ ತಾಲ್ಲೂಕಿನ ಮಾದಿಗ ಸಮಾಜದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ ದಲಿತ ಸಮುದಾಯದ ಜನರು ಎಲ್ಲ ರಂಗದಿಂದ ವಂಚಿತರಾಗಿದ್ದಾರೆ. ಬೇರೆಯವರೆ ಏಳ್ಗೆಯನ್ನು ಬಯಸದೆ ತಮ್ಮ ಏಳ್ಗೆಗೆಗೆ ಪ್ರಯತ್ನ ಪಡೆಯಬೇಕು. ಸತ್ತಾಗ ಹೇಳುವ ಮಂತ್ರ, ಪೂಜೆ ವೇಳೆ ಹೇಳುವ ತಿಳಿಯದ ಮಂತ್ರವನ್ನು ಸ್ವೀಕರಿಸಿದ್ದೇವೆ. ಮೊದಲು ಇತಿಹಾಸವನ್ನು ತಿಳಿಯುವ ಪ್ರಯತ್ನ ಮಾಡಬೇಕು. ಇತಿಹಾಸ ತಿಳಿಯದವರು ಬದುಕುವುದು ಕಷ್ಟ. ಎಷ್ಟೇ ಹಣ , ಅಂತಸ್ತು ಮಾಡಿದರು ಪ್ರಯೋಜನವಿಲ್ಲ’ ಎಂದು ತಿಳಿಸಿದರು.
‘ಪೋಷಕರು ತಮ್ಮ ಮಕ್ಕಳಲ್ಲಿ ದೇವರನ್ನು ಕಾಣಬೇಕು. ಹಬ್ಬ, ಜಾತ್ರೆ ಎಂದು ದುಂದು ವೆಚ್ಚ ಮಾಡುವ ಹಣವನ್ನು ತಮ್ಮ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿ. ಇದರಿಂದ ಅವರ ಭವಿಷ್ಯ ರೂಪಗೊಳ್ಳುತ್ತದೆ. ಯಾವುದೋ ಒಂದು ದೇವರ ಹೆಸರಿನಲ್ಲಿ ದೇವದಾಸಿ ಆಗುವ ಅನಿಷ್ಟ ಪದ್ಧತಿ, ಮೂಢನಂಬಿಕೆಯಿಂದ ಹೊರ ಬನ್ನಿ. ದೇವದಾಸಿ ಪದ್ದತಿಯನ್ನು ನಿರ್ಮೂಲನೆ ಮಾಡುವತ್ತ ಹೆಜ್ಜೆ ಹಾಕಿ’ ಎಂದು ಹೇಳಿದರು.
‘ ಹಿಂದುಳಿದ ಸಮಾಜದವರು ಮುಖ್ಯ ವಾಹಿನಿಗೆ ಬರಬೇಕು ಎಂಬುವುದು ಅಂಬೇಡ್ಕರ್ ಅವರ ಕನಸಾಗಿತ್ತು. ಅದೇ ರೀತಿ ನೀವು ನಿಮ್ಮ ಹಕ್ಕುಗಳನ್ನು ಪಡೆದು ಎಲ್ಲರಂತೆ ಬದುಕಲು ಪ್ರಯತ್ನಿಸಿ. ಜತೆಗೆ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನ ಗೌರವಿಸಿ, ರಕ್ಷಣೆ ಮಾಡಬೇಕು. ಬದಲಾವಣೆ ಮಾಡುವಂತ ಸಂದರ್ಭದಲ್ಲಿ ನಮ್ಮಿಂದ ಪ್ರತಿಭಟನೆಗಳು ನಡೆಯಬೇಕು ಎಂದರು.
ಪ್ರತಿ ವರ್ಷ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸುವಂತ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಇದರಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸತೀಶ್ ಪೌಂಡೇಷನ್ ದಿಂದಲೂ ಸಹ ಹೆಚ್ಚಿನ ಸಹಾಯ ನಿಮಗೆ ದೊರೆಯಲಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ 2019-20 ಸಾಲಿನಲ್ಲಿ ಎಸ್,ಎಸ್,ಎಲ್,ಸಿ, ವಾರ್ಷಿಕ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಸತ್ಕರಿಸಿದರು.
ಜಿಲ್ಲಾ ಪಂಚಾಯಿತಿ ಅದ್ಯಕ್ಷೆಆಶಾ ಐಹೊಳೆ, ಮಾದಿಗ ಸಮಾಜ ಸೇವಾ ಸಮಿತಿ ತಾಲೂಕಾ ಅದ್ಯಕ್ಷ ಬಸವರಾಜ ಕಾಡಾಪುರ, ಸ್ಥಳಿಯ ನಗರಸಭೆ ಸದಸ್ಯರು ಇತರರು ಇದ್ದರು.