ನವದೆಹಲಿ: ಇಡೀ ದೇಶ ಲಾಕ್ಡೌನ್ ಆಗಿದೆ. ಕೆಲವು ಕಡೆ ಸೀಲ್ಡೌನ್ ಕೂಡ ಮಾಡಿದೆ. ಸರ್ಕಾರ ಮನೆಯಿಂದ ಆಚೆ ಬರಬೇಡಿ ಅಂತ ಸಾರಿ ಸಾರಿ ಹೇಳುತ್ತಿದೆ. ಆದರೆ ಜನರು ಮಾತ್ರ ಸರ್ಕಾರದ ಮಾತು ಕೇಳುತ್ತಿಲ್ಲ. ಇದೀಗ ರೆಡ್ ಝೋನ್ನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಓಡಾಡಿದ ಇಡೀ ಕುಟುಂಬವೊಂದಕ್ಕೆ ಕೊರೊನಾ ಸಂಕಷ್ಟ ಎದುರಾಗಿದೆ.
ದೆಹಲಿಯ ರೆಡ್ ಝೊನ್ ಪ್ರದೇಶವಾಗಿರುವ ಜಹಾಂಗೀರ್ ಪುರಿಯಲ್ಲಿ ಒಂದೇ ಕುಟುಂಬದ 26 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ರೆಡ್ ಝೋನ್ ಅಂತ ಘೋಷಿಸಿ ನಿಯಮಗಳನ್ನು ಬಿಗಿ ಮಾಡಿದ್ದರೂ ಪೊಲೀಸರ ಕಣ್ಣು ತಪ್ಪಿಸಿ ಅದೇ ಪ್ರದೇಶದಲ್ಲಿದ್ದ ಇತರೆ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಹೀಗೆ ಪರಸ್ಪರ ಎಲ್ಲ ಕುಟುಂಬಗಳು ಒಂದೊಂದು ದಿನ ಒಬ್ಬರ ಮನೆಯಲ್ಲಿ ಸೇರಿಕೊಂಡಿದ್ದಾರೆ.
ಹೀಗೆ ಓಡಾಡಿದ ಕುಟುಂಬ ಸದಸ್ಯನಲ್ಲಿ ಓರ್ವನಿಗೆ ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇಡೀ ಕುಟುಂಬಕ್ಕೆ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಕುಟುಂಬದ 26 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಎಲ್ಲರನ್ನೂ ಈಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಆ ಕುಟುಂಬದವರು ಸಂಪರ್ಕ ಹೊಂದಿದ್ದ ಅಕ್ಕಪಕ್ಕದವರನ್ನು ಪರೀಕ್ಷೆ ನಡೆಸಲಾಗುತ್ತದೆ. ಹೀಗಾಗಿ ಜನರು ಮನೆಯಿಂದ ಹೊರಬರಬೇಡಿ. ಲಾಕ್ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಗೆ ಬರಬೇಕು ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.