ಬೆಂಗಳೂರು, ಮೇ17-ಕೇಂದ್ರ ಸರ್ಕಾರದ ಮಾರ್ಗಸೂಚಿ ನೀರಿಕ್ಷೆಯಲ್ಲಿರುವ ಸಾರಿಗೆ ಸಂಸ್ಥೆಗಳು ಬಸ್ ಸಂಚಾರ ಆರಂಭಸಲು ಸಿದ್ಧತೆ ಮಾಡಿಕೊಂಡಿವೆ. ಇತ್ತ ಸಾರ್ವಜನಿಕರು ಕೂಡ ಪ್ರಯಾಣ ಆರಂಭಿಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ.
ಲಾಕ್ಡೌನ್ ಸಡಿಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೋವಿಡ್-19 ಹರಡುವಿಕೆ ತಡೆಯಲು ಕೇಂದ್ರ ಸರ್ಕಾರ ಹೊರಡಿಸುವ ಮಾರ್ಗಸೂಚಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ, ನಾಳೆಯಿಂದ ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭಿಸಲಿವೆ.
ಕಳೆದ 54 ದಿನಗಳಿಂದ ತುರ್ತು ಹಾಗೂ ಅಗತ್ಯ ಸೇವೆ ಹೊರತುಪಡಿಸಿ ನಗರ ಸಾರಿಗೆ ಸೇರಿದಂತೆ ರಾಜ್ಯಾದ್ಯಂತ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ನೂರಾರು ಕೋಟಿ ರೂ ನಷ್ಟವನ್ನು ಸಾರಿಗೆ ಸಂಸ್ಥೆಗಳು ಅನುಭವಿಸಿದ್ದರೆ, ಬಸ್ ಸೌಲಭ್ಯವಿಲ್ಲದೆ, ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭಿಸುವಂತಾಗಿತ್ತು. ಅಲ್ಲದೆ, ಬಸ್ ಸಂಚಾರ ಇಲ್ಲದಿರುವುದರಿಂದ ಬಹಳಷ್ಟು ಮಂದಿ ಯಾವ ಸ್ಥಳದಲ್ಲಿ ಇದ್ದರೋ ಅಲ್ಲೇ ಸಿಲಿಕಿಕೊಂಡಿದ್ದಾರೆ.
ಬಸ್ ಸಂಚಾರ ಯಥಾರೀತಿ ಆರಂಭವಾದರು ಅವರೆಲ್ಲ ತಮ್ಮ ಸ್ಥಳಗಳಿಗೆ ಮರಳಲಿದ್ದಾರೆ. ದೈನಂದಿನ ಕೆಲಸಗಳಿಗೂ ಅನುಕೂಲವಾಗಲಿದೆ.ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಬಸ್ ಸಂಚಾರಕ್ಕೆ ಅಗತ್ಯ ಸಿದ್ದತೆ ಮಾಡಿಕೊಂಡಿದ್ದು, ಕೇಂದ್ರ ಸರ್ಕಾರ ನೂತನ ಮಾರ್ಗಸೂಚಿ ನಿರೀಕ್ಷಿಸುತ್ತಿವೆ.
ಈಗಾಗಲೇ ಸಿಬ್ಬಂದಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಾಳೆಯಿಂದ ಹಾಜರಾಗುವಂತೆ ಸೂಚನೆ ನೀಡಲಾಗಿದೆ.ಕೆಲಸಕ್ಕೆ ಹಾಜರಾಗುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಥರ್ಮಲ್ ಪರೀಕ್ಷೆ ಮಾಡಲಾಗುತ್ತದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದು ಸೇರಿದಂತೆ ಸೋಂಕು ಹರಡುವಿಕೆ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಲಾಕ್ಡೌನ್ ಸಡಿಲಿಕೆಯಾಗಿದ್ದರೂ ಕೊರೋನಾ ಕಬಂಧ ಬಾಹು ಹಿಡಿತ ಮಾತ್ರ ಸಡಿಲಿಕೆ ಆಗಿಲ್ಲ. ಸಿಬ್ಬಂದಿ ನೌಕರರಷ್ಟೇ ಅಲ್ಲ, ಸಾರ್ವಜನಿಕರೂ ಕೂಡ ಸ್ವಯಂ ಜಾಗೃತಿ ವಹಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ.ಇಂದು ರಾತ್ರಿವೇಳೆಗೆ ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಹೊರಬೀಳಲಿದ್ದು, ಬಸ್ ಸಂಚಾರದ ಗೊಂದಲಕ್ಕೆ ತೆರೆ ಬೀಳಲಿದೆ.