Breaking News
Home / ನವದೆಹಲಿ / ಭಾರತದಲ್ಲಿ ಕೊರೋನಾ ರೌದ್ರಾವತಾರ : 24 ಗಂಟೆಗಳಲ್ಲಿ 5,000 ಮಂದಿಗೆ ಪಾಸಿಟಿವ್..!
Microscopic view of Coronavirus, a pathogen that attacks the respiratory tract. Analysis and test, experimentation. Sars. 3d render

ಭಾರತದಲ್ಲಿ ಕೊರೋನಾ ರೌದ್ರಾವತಾರ : 24 ಗಂಟೆಗಳಲ್ಲಿ 5,000 ಮಂದಿಗೆ ಪಾಸಿಟಿವ್..!

Spread the love

ನವದೆಹಲಿ/ಮುಂಬೈ, ಮೇ 17-ವಿನಾಶಕಾರಿ ಕೊರೊನಾ ಆಕ್ರಮಣದ ತೀವ್ರತೆ ದೇಶದಲ್ಲಿ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಹೆಮ್ಮಾರಿ ನಿಗ್ರಹಕ್ಕಾಗಿ ಜಾರಿಯಲ್ಲಿರುವ ಮೂರನೇ ಹಂತದ ಲಾಕ್‍ಡೌನ್ ಅವಧಿ ಇಂದು ಮಧ್ಯರಾತ್ರಿ ಪೂರ್ಣಗೊಳ್ಳಲಿದ್ದು, ನಾಳೆಯಿಂದ ಹೊಸ ಸ್ವರೂಪದಲ್ಲಿ ವಿಸ್ತರಣೆಯಾಗಲಿದೆ.

ದೀರ್ಘಾವಧಿ ಲಾಕ್‍ಡೌನ್ ಮತ್ತು ಕಠಿಣ ನಿರ್ಬಂಧಗಳ ಅವಧಿಯಲ್ಲಿ ನಿಯಂತ್ರಣಕ್ಕೆ ಬರದಿರುವ ವೈರಸ್ ಅನ್‍ಲಾಕ್ ವೇಳೆ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವ ಆತಂಕವೂ ಇದೆ.

ಕಿಲ್ಲರ್ ವೈರಸ್ ಆರ್ಭಟ ಲಾಕ್‍ಡೌನ್ ಸಡಿಲಿಕೆ ನಂತರ ದಿನೇ ದಿನೇ ವ್ಯಾಪಕವಾಗುತ್ತಿರುವುದು ಗಮನಾರ್ಹ ಸಂಗತಿ. ರಾಷ್ಟ್ರವ್ಯಾಪಿ ಭಯಭೀತಿಯ ವಾತಾವರಣ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದ್ದು, ಸಾವು ಮತ್ತು ಸೋಂಕು ಪ್ರಕರಣಗಳು ಆಘಾತಕಾರಿ ಪ್ರಮಾಣದಲ್ಲಿ ವೃದ್ದಿಯಾಗುತ್ತಿದೆ.

ಭಾರತದಲ್ಲಿ ಸಾವಿನ ಸಂಖ್ಯೆ 3,000 ದಾಟಲಿದ್ದು, ಸೋಂಕು ಪೀಡಿತರ ಸಂಖ್ಯೆಯೂ 91,000 ಮೀರಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 120 ಸಾವುಗಳು ಮತ್ತು ದಾಖಲೆ ಪ್ರಮಾಣದ 4,987 ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮೂರನೇ ಹಂತದ ಲಾಕ್‍ಡೌನ್ ನಂತರ ಸತತ 14ನೇ ದಿನ ಇದು ಅತಿ ಹೆಚ್ಚು ಸೋಂಕುಗಳ ಪ್ರಕರಣವಾಗಿದೆ. ಈ ಅವಧಿಯಲ್ಲಿ ಪ್ರತಿ ದಿನ ಸರಾಸರಿ 3,200 ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ಕಳೆದ 12 ದಿನಗಳಲ್ಲಿ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿರುವುದೂ ಕೂಡ ಆತಂಕದ ಸಂಗತಿ.

ಮತ್ತೊಂದು ಕಳವಳಕಾರಿ ವಿದ್ಯಮಾನವೆಂದರೆ ಮೂರು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ 10,000 ದಾಟಿದೆ. ಮಹಾರಾಷ್ಟ್ರ ಅತಿ ಅಪಾಯದಲ್ಲಿದ್ದು, ಅಲ್ಲಿ 30,709 ರೋಗ ಪೀಡಿತರಾಗಿದ್ದಾರೆ. ಅತಿ ಹೆಚ್ಚು ಸೋಂಕು ರೋಗಿಗಳು ಇರುವ ರಾಜ್ಯಗಳಲ್ಲಿ ಗುಜರಾತ್-10,988 ಮತ್ತು ತಮಿಳುನಾಡು-10,585 ಸ್ಥಾನ ಪಡೆದಿದೆ.

ನಿನ್ನೆ ಬೆಳಗ್ಗೆ 8 ಗಂಟೆಯಿಂದ 24 ಗಂಟೆಗಳ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 120 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿದೆ. ಮಹಾರಾಷ್ಟ್ರದಲ್ಲಿ 67, ಗುಜರಾತ್‍ನಲ್ಲಿ 19, ಉತ್ತರ ಪ್ರದೇಶ-9, ಪಶ್ಚಿಮ ಬಂಗಾಳ 7, ದೆಹಲಿ 6, ಮಧ್ಯ ಪ್ರದೇಶ 4, ತಮಿಳುನಾಡು 3, ಹರಿಯಾಣ 2, ಆಂಧ್ರಪ್ರದೇಶ, ಜಮ್ಮು-ಕಾಶ್ಮೀರ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ದೇಶದಲ್ಲಿ ಡೆಡ್ಲಿ ಕೋವಿಡ್-19 ವೈರಸ್‍ಗೆ ಬಲಿಯಾದವರ ಸಂಖ್ಯೆ 2,892ಕ್ಕೇರಿದ್ದು, ಸಾಂಕ್ರಾಮಿಕ ರೋಗಿಗಳ ಸಂಖ್ಯೆ 90,927 ತಲುಪಿದೆ. ಇಂದು ಮಧ್ಯರಾತ್ರಿಯೊಳಗೆ ಸೋಂಕಿತರ ಪ್ರಮಾಣ 94,000 ದಾಟುವ ಆತಂಕವೂ ಇದೆ.

ಲಾಕ್‍ಡೌನ್ ಸಡಿಲ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಮಹಾಸ್ಫೋಟವಾಗಿದ್ದು, ಸಾವು-ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಿದೆ. ಜೊತೆ ಸಮುದಾಯ ಸೋಂಕಿನ ಸಾಧ್ಯತೆಯ ಭಯವೂ ಕಾಡುತ್ತಿದೆ. ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಶೇ.37.51ರಷ್ಟು ಸುಧಾರಣೆ ಕಂಡುಬಂದಿದ್ದರೂ, ಮತ್ತೊಂದೆಡೆ ದಿನನಿತ್ಯ ಮರಣ ಮತ್ತು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

ಈವರೆಗೆ ಸಂಭವಿಸಿರುವ 2,872 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಒಟ್ಟು 1,135 ಸಾವುಗಳು ವರದಿಯಾಗಿವೆ. ಮೇ ತಿಂಗಳಿನಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ ಮಹಾರಾಷ್ಟ್ರದಲ್ಲೇ ಶೇ.55ರಷ್ಟು ಮರಣ ವರದಿಯಾಗಿದೆ. ಮುಂಬೈನಲ್ಲಿ ಅತಿ ಹೆಚ್ಚು ಸಾವು ಮತ್ತು ಸೋಂಕು ಪ್ರಕರಣಗಳು ವರದಿಯಾಗಿದೆ.

ನಂತರದ ಸ್ಥಾನಗಳಲ್ಲಿ ಗುಜರಾತ್ (625), ಮಧ್ಯಪ್ರದೇಶ (243), ಪಶ್ಚಿಮ ಬಂಗಾಳ (232), ದೆಹಲಿ (129). ರಾಜಸ್ತಾನ (129), ದೆಹಲಿ (124), ಉತ್ತರ ಪ್ರದೇಶ (104), ತಮಿಳುನಾಡು (74), ಆಂಧ್ರಪ್ರದೇಶ (49), ಕರ್ನಾಟಕ (36), ತೆಲಂಗಾಣ (34), ಮತ್ತು ಪಂಜಾಬ್ (32) ರಾಜ್ಯಗಳಿವೆ.

ಹರಿಯಾಣ 13, ಜಮ್ಮು-ಕಾಶ್ಮೀರ ತಲಾ 12, ಬಿಹಾರ ಏಳು, ಕೇರಳ ನಾಲ್ಕು, ಜಾರ್ಖಂಡ್, ಚಂಡಿಗಢ, ಹಿಮಾಚಲ ಪ್ರದೇಶ ಮತ್ತು ಒಡಿಶಾ ತಲಾ ಮೂರು, ಅಸ್ಸಾಂ ಎರಡು ಹಾಗೂ ಪುದುಚೇರಿ, ಮೇಘಾಲಯ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 53,943ರಷ್ಟಿದೆ. ಈ ಮಧ್ಯೆ, ಈವರೆಗೆ 34,108(ಚೇತರಿಕೆ ಪ್ರಮಾಣ ಶೇ.37.51) ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜÁಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ