ಲಖನೌ: ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ ಉತ್ತರ ಪ್ರದೇಶದ ಹಾಥರಸ್ನಲ್ಲಿ ನಡೆದಿದೆ. ಪಾಲಕರನ್ನು ದೂರವಿಟ್ಟು ತರಾತುರಿಯಲ್ಲಿ ಗ್ಯಾಂಗ್ರೇಪ್ ದೌರ್ಜನ್ಯದಿಂದ ಮೃತಪಟ್ಟಳೆನ್ನಲಾದ ಯುವತಿಯ ಅಂತ್ಯಕ್ರಿಯೆ ನೆರವೇರಿಸಿರುವ ಪೊಲೀಸರ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಇದೀಗ ಪೊಲೀಸರ ಕರಾಳ ಮುಖವನ್ನು ಸಂತ್ರಸ್ತೆಯ ಸಂಬಂಧಿಕರು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುವುದನ್ನು ಸಂಬಂಧಿಕರಿಗೆ ನಿರ್ಬಂಧಿಸಲಾಗಿದ್ದು, ಗ್ರಾಮದಲ್ಲಿ ಹೆಚ್ಚು ಜನರು ಸೇರಿದಂತೆ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಅಲ್ಲದೆ, ಯುವತಿಯ ಶವ ಸುಟ್ಟ ಪ್ರದೇಶಕ್ಕೂ ಪೊಲೀಸರು ಯಾರನ್ನು ಬಿಡುತ್ತಿಲ್ಲ. ಇದರ ನಡುವೆ ಇಂದು ಬೆಳಗ್ಗೆ ಸಂತ್ರಸ್ತೆ ಕುಟುಂಬದ ಅಪ್ರಾಪ್ತನೊಬ್ಬ ಮಾಧ್ಯಮದವರ ಮುಂದೆ ಕಾಣಿಸಿಕೊಂಡು ಪೊಲೀಸರ ದೌರ್ಜನ್ಯವನ್ನು ವಿವರಿಸಿದ್ದು, ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡುವಂತೆ ಹೇಳಿದ್ದಾರೆ ಮತ್ತು ಕೆಲವೊಂದು ಮೊಬೈಲ್ಗಳನ್ನು ನಮ್ಮಂದಿ ಕಸಿದುಕೊಂಡಿದ್ದಾರೆಂದು ಆರೋಪಿಸಿದ್ದಾನೆ.
ಸಂತ್ರಸ್ತೆ ಕುಟುಂಬದ ಸದಸ್ಯರು ಸಹ ಪೊಲೀಸರ ಕಣ್ತಪ್ಪಿಸಿಕೊಂಡು ಜಮೀನುಗಳನ್ನು ದಾಟಿ ಗ್ರಾಮದ ಹೊರಭಾಗದಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು. ಈ ವೇಳೆ ಮಾತನಾಡಿದ ಅವರು ಪೊಲೀಸರು ನಮ್ಮ ಮೊಬೈಲ್ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಲು ನಮ್ಮ ಕುಟುಂಬವೇ ನಮ್ಮನ್ನು ಇಲ್ಲಿಗೆ ಕಳುಹಿಸಿದರು. ನಮ್ಮನ್ನು ಹೊರ ಹೋಗಲು ಬಿಡುತ್ತಿಲ್ಲ. ಮಾಧ್ಯಮದೊಂದಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಮಗೆ ಬೆದರಿಕೆ ಒಡ್ಡುತ್ತಿದ್ದಾರೆ. ಹೇಗೋ ಅವರ ಕಣ್ತಪ್ಪಿಸಿ ನಾವಿಲ್ಲಿಗೆ ಬಂದಿದ್ದೇವೆಂದು ಹೇಳಿದ್ದಾರೆ.
ಕುಟುಂಬದ ಸದಸ್ಯರು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬರುವುದನ್ನು ನೋಡಿ, ಅಲ್ಲಿಂದ ಪರಾರಿಯಾದರು. ಮಾಧ್ಯಮಗಳ ಜತೆ ಮಾತನಾಡಲು ಸಂತ್ರಸ್ತೆ ಕುಟುಂಬದವರನ್ನೇಕೆ ತಡೆಯುತ್ತಿದ್ದೀರಾ ಎಂದು ವರದಿಗಾರರು ಪ್ರಶ್ನಿಸಿದರೆ, ಏನನ್ನು ಉತ್ತರಿಸದೇ ಪೊಲೀಸರು ಮೌನವಾಗಿದ್ದರು. ಹೀಗೆ ಮಾಧ್ಯಮ ಮತ್ತು ಸಂತ್ರಸ್ತೆಯ ಕುಟುಂಬದ ನಡುವಿನ ಭೇಟಿಗೆ ಪೊಲೀಸರು ತೊಡಕಾಗುತ್ತಲೇ ಇದ್ದಾರೆ.
ಇನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಹಾಥರಸ್ ಗ್ರಾಮಕ್ಕೆ ಮಾಧ್ಯಮಗಳ ಭೇಟಿಗೆ ನಿರ್ಬಂಧ ಹೇರಿದ್ದಾರೆ. ದೇಶದ ಜನತೆಯ ಮುಂದೆ ಕೆಲವೊಂದು ನೈಜ ಸಂಗತಿಗಳನ್ನು ಹೊರಗಾಕಲು ಮಾಧ್ಯಮಗಳಿಗೆ ಅವಕಾಶ ನೀಡುತ್ತಿಲ್ಲವೆಂದು ರಾಜ್ಯ ಕಾಂಗ್ರೆಸ್ ಘಟಕ ಆರೋಪಿಸಿದೆ