ಮಂಡ್ಯ :ರಾಜಪೇಟೆ ಪಟ್ಟಣದ ಸ್ವರ್ಣಜಯಂತಿ ಶಹರಿ ರೋಜ್ ಗಾರ್ ಯೋಜನಾ ಭವನದ ಸಭಾಂಗಣದಲ್ಲಿ ಜನತಾ ಜೀವವೈವಿದ್ಯ ದಾಖಲಾತಿ ನೋಂದಣಿ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿದರು.
ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಸೇರಿದಂತೆ ಸಂಪೂರ್ಣವಾಗಿ ಪರಿಸರವೇ ಮಾಲಿನ್ಯವಾಗುತ್ತಿರುವುದರಿಂದ ಅಪರೂಪದ ಜೀವಸಂಕುಲಗಳು ನಶಿಸಿಹೋಗುತ್ತಿವೆಯಲ್ಲದೇ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಆದ್ದರಿಂದ ರಾಜ್ಯ ಸರ್ಕಾರವು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮಟ್ಟದಲ್ಲಿ ಜನತಾ ಜೀವ ವೈವಿದ್ಯತಾ ಸಮಿತಿಗಳನ್ನು ರಚಿಸಿ ಅಪರೂಪದ ಜೀವಸಂಕುಲಗಳ ರಕ್ಷಣೆಗೆ ಜನಸಾಮಾನ್ಯರಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಜಾಗತಿಕ ತಾಪಮಾನದ ಏರುಪೇರಿನಿಂದಾಗಿ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ.
ಆದ್ದರಿಂದ ಜೀವ ವೈವಿದ್ಯ ಸಮಿತಿಯ ಸದಸ್ಯರು ಸಮಾಜಕ್ಕೆ ಅಗತ್ಯವಾಗಿ ಬೇಕಾದ ವಸ್ತುಗಳು, ಜೀವಸಂಕುಲಗಳು ಹಾಗೂ ಪ್ರಾಣಿ ಪಕ್ಷಿಗಳ ಬಗ್ಗೆ ಹಾಗೂ ಪುರಾತನ ಪದ್ದತಿಯಲ್ಲಿ ಆರೋಗ್ಯ ಸಂವರ್ಧನೆ ಮಾಡುವ ನಾಟಿ ವೈದ್ಯರ ಬಗ್ಗೆ ಅಧ್ಯಯನ ಮಾಡಿ ಸಮಿತಿಗೆ ವರದಿ ನೀಡಬೇಕು ಎಂದು ಮುಖ್ಯಾಧಿಕಾರಿ ಸತೀಶ್ ಕುಮಾರ್ ಮನವಿ ಮಾಡಿದರು.
ಸಮಿತಿಯ ಸದಸ್ಯರಾದ ಡಾ.ದಿವಾಕರ್, ಕೆ.ಆರ್.ನೀಲಕಂಠ, ಪುರಸಭೆಯ ಆರೋಗ್ಯ ಪರಿವೀಕ್ಷಕ ಅಶೋಕ್, ಅಂಗನವಾಡಿ ಕಾರ್ಯಕರ್ತೆ ಭವ್ಯ, ಪುರಸಭಾ ಕಾರ್ಯಾಲಯದ ಕಿರಿಯ ಆರೋಗ್ಯ ಪರಿವೀಕ್ಷಕ ಚೆಲುವರಾಜು, ರಾಮನಗರದ ಜ್ಞಾನಭಾರತಿ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯ ಸಂಚಾಲಕ ಬಳ್ಳೇಕೆರೆ ಪ್ರದೀಪ್ ಮತ್ತಿತರರು ಭಾಗವಹಿಸಿದ್ದರು.