ಬೆಂಗಳೂರು, – ಬಿಜೆಪಿ ನಾಯಕತ್ವದ ಬದಲಾವಣೆಯ ನಂತರದಲ್ಲಿ ಉಂಟಾಗಬಹುದಾದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಸರ್ಕಾರ ರಚನೆ ಮಾಡುವ ಪ್ರಯತ್ನ ಬೇಡ ಎಂದು ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟಪಡಿಸಿದೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ ಅವಕಾಶಗಳು ಎದುರಾದರೆ ಸರ್ಕಾರ ರಚನೆಯ ಪ್ರಸ್ತಾವವನ್ನು ರಾಜ್ಯ ನಾಯಕರು ಹೈಕಮಾಂಡ್ ಮುಂದಿಟ್ಟಿದ್ದಾರೆ.
ಆದರೆ, ಇದಕ್ಕೆ ಹೈಕಮಾಂಡ್ ಸ್ಪಷ್ಟ ನಕಾರ ವ್ಯಕ್ತಪಡಿಸಿದ್ದು, ಸಂಪೂರ್ಣ ಬಹುಮತ ಬರದ ಹೊರತು ಮೈತ್ರಿ ಅಥವಾ ಅನ್ಯಪಕ್ಷಗಳಿಂದ ಬರುವ ಶಾಸಕರನ್ನು ನಂಬಿಕೊಂಡು ಸರ್ಕಾರ ರಚಿಸುವ ಸಹವಾಸವೇ ಬೇಡ ಎಂದು ಖಡಾಕಂಡಿತವಾಗಿ ಹೇಳಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ನಾಯಕತ್ವ ಬದಲಾಗುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ತೆರೆಮರೆಯಲ್ಲಿ ಅಸಮಾಧಾನಗಳು ಹೊಗೆಯಾಡುತ್ತಿವೆ.ಅಂದುಕೊಂಡಷ್ಟು ಸುಲಭವಾಗಿ ನಾಯಕತ್ವ ಬದಲಾವಣೆಗೊಳ್ಳುವುದಿಲ್ಲ ಎಂಬ ಅಂದಾಜಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ವಲಸೆ ಹೋಗಿದ್ದ 17 ಮಂದಿ ಶಾಸಕರ ಪೈಕಿ ಕೆಲವರು ಮರಳಿ ಗೂಡಿಗೆ ಬರಲು ಹವಣಿಸುತ್ತಿದ್ದಾರೆ. ಒಂದು ವೇಳೆ ಆ ರೀತಿಯ ಬೆಳವಣಿಗೆಗಳು ಘಟಿಸಿದ್ದೇ ಆದರೆ, ಬಿಜೆಪಿ ಸರ್ಕಾರ ಪತನಗೊಳ್ಳುವುದು ನಿಶ್ಚಿತ. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವಾಗ ನಡೆದಂತಹ ಪಕ್ಷಾಂತರ ಪರ್ವವೇ ಮತ್ತೆ ಮರುಕಳಿಸಿದರೂ ಆಶ್ಚರ್ಯ ಪಡುವಂತಿಲ್ಲ.
ಈ ಎಲ್ಲಾ ಮುನ್ಸೂಚನೆಗಳ ಹಿನ್ನೆಲೆಯಲ್ಲಿ ಸಂದರ್ಭನುಸಾರ ನಿರ್ಧಾರ ತೆಗೆದುಕೊಳ್ಳುವ ಕುರಿತು ಹೈಕಮಾಂಡ್ ಜತೆ ಚರ್ಚಿಸಲಾಗಿದೆ. ಆದರೆ, ಈಗಾಗಲೇ ಕರ್ನಾಟಕದಲ್ಲಿ ಎರಡು ಬಾರಿ ಮೈತ್ರಿ ಸರ್ಕಾರ ರಚಿಸಿ ಕೈ ಸುಟ್ಟಿಕೊಳ್ಳಲಾಗಿದೆ. ಮತ್ತೊಂದು ಬಾರಿ ಇಂತಹ ಪ್ರಯತ್ನ ಬೇಡ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲೂ ಚುನಾವಣೆ ನಡೆದರೂ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಬರುವ ಪೂರಕ ವಾತಾವರಣವಿದೆ. ಹೀಗಾಗಿ ಒಂದೂವರೆ ವರ್ಷದ ಅಧಿಕಾರದ ಆಸೆಗೆ ಬಹುಮತ ಪಡೆದುಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುವುದು ಬೇಡ ತಾಳ್ಮೆಯಿಂದ ಇರಿ ಎಂದು ಸಲಹೆ ನೀಡಲಾಗಿದೆ