ಬೆಂಗಳೂರು, ಜು. 23: ರಾಜ್ಯದಲ್ಲಿ `ಮುಖ್ಯಮಂತ್ರಿ ಬದಲಾವಣೆ’ ಚರ್ಚೆ ಬೆನ್ನಲ್ಲೆ `ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಮೂಲ ಕಾರಣಕರ್ತರು’ ಎನ್ನಲಾದ ವಲಸಿಗ ಸಚಿವರು ರಾಜೀನಾಮೆಗೆ ಮುಂದಾಗಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಗುರುವಾರ ವಿಧಾನಸೌಧದಲ್ಲಿನ ನಡೆದ ಸಚಿವ ಸಂಪುಟ ನಡುವೆಯೇ ವಲಸಿಗರು ಒಂದೊಮ್ಮೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದರೆ ತಾವೂ ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕ ಎದುರಾಗಿದ್ದು, ಸಚಿವ ಬಿ.ಎ. ಬಸವರಾಜ್ (ಭೈರತಿ) ಕೊಠಡಿಯಲ್ಲಿ ಆರು ಮಂದಿ ಸಚಿವರು ಒಟ್ಟಿಗೆ ಸಭೆ ಸೇರಿ ಸಮಾಲೋಚನೆ ನಡೆಸಿದ್ದಾರೆಂದು ಗೊತ್ತಾಗಿದೆ.
ಸಭೆ ಬಳಿಕ ಸಚಿವರಾದ ಕೆ.ಸುಧಾಕರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್ ಪ್ರತ್ಯೇಕವಾಗಿ ಏಕಮಾದರಿ ಪತ್ರಗಳನ್ನು ಹಿಡಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಯಡಿಯೂರಪ್ಪ ರಾಜೀನಾಮೆ ನೀಡಿದರೆ ವಲಸಿಗ ಸಚಿವರೂ ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆಂದು ಹೇಳಲಾಗುತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.
ರಾಜೀನಾಮೆ ಪತ್ರಗಳಲ್ಲ
ಯಡಿಯೂರಪ್ಪ ರಾಜೀನಾಮೆ ನೀಡಿದರೆ ವಲಸಿಗ ಸಚಿವರೂ ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆಂದು ಹೇಳಲಾಗುತ್ತಿದ್ದ ಪತ್ರದ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಆರೋಗ್ಯ ಸಚಿವ ಡಾ.ಸುಧಾಕರ್, ಇವು ರಾಜೀನಾಮೆ ಪತ್ರಗಳಲ್ಲ. ಯಡಿಯೂರಪ್ಪನವರನ್ನು, ಬಿಜೆಪಿಯ ತತ್ವ ಸಿದ್ಧಾಂತ ನಂಬಿ ಬಂದಿದ್ದೇವೆ, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇವೆ ಎಂದರು.