ಬಾಗಲಕೋಟೆ: ಮೇವು ತರಲೆಂದು ಹೊಲಕ್ಕೆ ಹೋದ ವೇಳೆ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ (Dead Body) ಪತ್ತೆಯಾದ ಘಟನೆ ಬಾಗಲಕೋಟೆ (Bagalkot) ಜಿಲ್ಲೆ ಮುಧೋಳ ತಾಲೂಕಿನ ಶಿರೋಳ ಬಳಿ ನಡೆದಿದೆ. ಜುಲೈ 16ರಂದು ಮೇವು ತರಲು ಹೊಲಕ್ಕೆ ಹೋಗಿದ್ದ ಮಹಿಳೆ (Women) ಮನೆಗೆ ವಾಪಾಸ್ಸಾಗಿರಲಿಲ್ಲ. ಇದೀಗ ನಾಪತ್ತೆಯಾಗಿದ್ದ ಮಹಿಳೆಯ ದೇಹ ರುಂಡ, ಕೈಕಾಲು ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ (Death) ಸುತ್ತ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಮೃತ ಮಹಿಳೆಯನ್ನು ರಮೀಜಾ ಅಲಾಸ (45) ವರ್ಷ ಎಂದು ಪತ್ತೆಹಚ್ಚಲಾಗಿದ್ದು, ಶಿರೋಳ ಬಳಿ ಘಟಪ್ರಭಾ ನದಿ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ಬನಹಟ್ಟಿ ತಾಲ್ಲೂಕಿನ ಹನಗಂಡಿ ಗ್ರಾಮದ ನಿವಾಸಿಯಾದ ಅವರು ಸದ್ಯ ರಬಕವಿಬನಹಟ್ಟಿ ತಾಲ್ಲೂಕಿನ ಯರಗಟ್ಟಿ ಗ್ರಾಮದ ತೋಟದ ಮನೆಯೊಂದರಲ್ಲಿ ವಾಸವಿದ್ದರು. ಜುಲೈ 16ರಂದು ರಮೀಜಾ ನಾಪತ್ತೆಯಾಗಿದ್ದರು.
ಮೇವು ತರಲು ಹೊಲಕ್ಕೆ ಹೋದ ರಮೀಜಾ ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಅವರಿಗಾಗಿ ಹುಡುಕಿದ ಸಹೋದರ, ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಇದೀಗ ಶಿರೋಳ ಬಳಿ ಘಟಪ್ರಭಾ ನದಿ ಕಾಲುವೆಯಲ್ಲಿ ರಮೀಜಾ ಶವ ಪತ್ತೆಯಾಗಿದ್ದು, ದೇಹದ ಅಂಗಾಂಗಳನ್ನು ಕತ್ತರಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಮಾಟ ಮಂತ್ರಕ್ಕಾಗಿ ದುಷ್ಕರ್ಮಿಗಳು ಮಾಡಿದ ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ.
ಸದ್ಯ ರಮೀಜಾ ಶವ ಪತ್ತೆಯಾಗಿದ್ದರೂ, ರುಂಡ ಎರಡು ಕೈ ಕಾಲು ನಾಪತ್ತೆಯಾಗಿದೆ. ಕೊಲೆಗೈದವರು ಯಾರೆಂಬ ಸುಳಿವು ಸಹ ಈವರೆಗೆ ಸಿಕ್ಕಿಲ್ಲ. ಹೀಗಾಗಿ ದುಷ್ಕರ್ಮಿಗಳಿಂದ ಕೊಲೆ ಎಂದು ದೂರು ದಾಖಲಾಗಿದೆ. ದೇಹದ ಅಂಗಾಂಗಗಳು ನಾಪತ್ತೆಯಾಗಿರುವುದರಿಂದ ಮಾಟ ಮಂತ್ರ ಕ್ಷುದ್ರ ಶಕ್ತಿಗಾಗಿ ನರಬಲಿ ಕೊಡಲಾಗಿದೆಯಾ? ಎಂಬ ಶಂಕೆ ಬಲವಾಗಿದೆ.
ಒಂದುವೇಳೆ, ನರಬಲಿ ಕೊಡಲಾಗಿದೆ ಎಂಬ ಅನುಮಾನ ನಿಜವೇ ಆದಲ್ಲಿ ಈ ವಿಚಾರ ಗ್ರಾಮಸ್ಥರಲ್ಲಿ, ಅಕ್ಕಪಕ್ಕದ ಊರಿನವರಲ್ಲಿ ಇನ್ನೊಂದು ಬಗೆಯ ಭಯಕ್ಕೆ ಕಾರಣವಾಗಲಿದ್ದು, ಅದನ್ನು ಮಟ್ಟಹಾಕಲೇಬೇಕಿದೆ. ಹೊಲಕ್ಕೆ ಹೋದವರನ್ನು ಕೊಲೆ ಮಾಡಿರುವುದು ಈಗಾಗಲೇ ನೆರೆಹೊರೆಯವರಲ್ಲಿ ಆತಂಕ ಮೂಡಿಸಿದ್ದು, ನಿರ್ಭೀತಿಯಿಂದ ಜಮೀನುಗಳಿಗೆ ತೆರಳುವುದಕ್ಕೂ ಹಿಂದೆಮುಂದೆ ಯೋಚಿಸುವಂತಾಗಿದೆ. ಸದ್ಯ ಈ ಬಗ್ಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಬನಹಟ್ಟಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.