ಬೆಂಗಳೂರು, ಜುಲೈ 16: ನಮ್ಮ ಮೆಟ್ರೋ ಕಾಮಗಾರಿಗಾಗಿ 350 ಮರಗಳನ್ನು ಕಡಿಯಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಹೈಕೋರ್ಟ್ ಆದೇಶದಿಂದಾಗಿ ಸುಮಾರು ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ರೈಲು ಮಾರ್ಗ ಕಾಮಗಾರಿ ಪುನಾರಂಭವಾಗಲಿದೆ.
ಆದರೆ ಷರತ್ತೊಂದನ್ನು ವಿಧಿಸಿತ್ತು, ಅದರ ಬದಲಾಗಿ 4 ಸಾವಿರ ಗಿಡಗಳನ್ನು ನೆಡುವಂತೆ ಸೂಚಿಸಲಾಗಿದೆ ನಾಗವಾರ-ಗೊಟ್ಟಿಗೆರೆ ಮಾರ್ಗದ ಮೆಟ್ರೊ ರೈಲು ಯೋಜನೆಗೆ ಮರಗಳನ್ನು ಕಡಿಯಲು ಒಪ್ಪಿಗೆ ನೀಡಿರುವ ಹೈಕೋರ್ಟ್, ಅದಕ್ಕೆ ಪರಿಹಾರವಾಗಿ 4 ಸಾವಿರ ಗಿಡಗಳನ್ನು ನೆಡುವಂತೆ ಬಿಎಂಆರ್ಸಿಎಲ್ಗೆ ಆದೇಶಿಸಿದೆ.
ಈ ವೇಳೆ ಬಿಎಂಆರ್ ಸಿಎಲ್ ಪರ ವಾದ ಮಂಡಿಸಿದ ಹಿರಿಯ ವಕೀಲರ ಉದಯ್ ಹೊಳ್ಳ, ಮೆಟ್ರೋ ರೈಲು ಕಾಮಗಾರಿ ಸ್ಥಗಿತಗೊಂಡಿರುವುದರಿಂದ ನಿಗಮಕ್ಕೆ ಸಾಕಷ್ಟು ನಷ್ಟವಾಗುತ್ತಿದೆ.
ಇತ್ತೀಚೆಗೆ ರೈಲು ಮಾರ್ಗ ನಿರ್ಮಾಣಕ್ಕಾಗಿ ಕಡಿಯುವ ಮರಗಳಿಗೆ ಪರಿಹಾರದ ರೂಪದಲ್ಲಿ 3500 ಗಿಡಗಳನ್ನು ನೆಡುವಂತೆ ವೃಕ್ಷ ಸಂರಕ್ಷಣಾಧಿಕಾರಿ ಸೂಚಿಸಿದ್ದಾರೆ. ನಿಗಮ ಅದಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಡಲು ಸಿದ್ದವಿದೆ. ನ್ಯಾಯಾಲಯ ಈ ವಿಚಾರ ಪರಿಗಣಿಸಬೇಕೆಂದು ಕೋರಿದರು.
ವಾದ ಪರಿಗಣಿಸಿದ ಪೀಠ, ವೃಕ್ಷ ಅಧಿಕಾರಿ ಈಗಾಗಲೇ ಅನುಮತಿ ನೀಡಿರುವಂತೆ ಮರಗಳನ್ನು ಕತ್ತರಿಸಬಹುದು. ಆದರೆ ಅದಕ್ಕೆ ಪರ್ಯಾಯವಾಗಿ ನಿಗಮ 3500 ಗಿಡಗಳನ್ನು ನೆಡುವುದಾಗಿ ಪ್ರಮಾಣಪತ್ರ ಸಲ್ಲಿಸಿದೆ. ಆದರೆ ನ್ಯಾಯಾಲಯ 4 ಸಾವಿರ ಗಿಡಗಳನ್ನು ನೆಡಲು ಬಯಸುತ್ತದೆ. ಹೀಗಾಗಿ. ನಿಗಮ 4 ಸಾವಿರ ಗಿಡಗಳನ್ನು ನೆಡಬೇಕು.
ಅಲ್ಲದೇ, ವೃಕ್ಷಾಧಿಕಾರಿಗೆ ನಿಗಮ ಸಲ್ಲಿಸಿರುವ ಪ್ರಸ್ತಾವದಲ್ಲಿ ತಿಳಿಸಿರುವಂತೆ 33 ಜಾತಿಯ ಗಿಡಗಳಲ್ಲಿ ಎಷ್ಟೆಷ್ಟು ನೆಡಲಾಗುವುದು ಎಂಬ ವರದಿಯನ್ನು ಸಲ್ಲಿಸಿ ಎಂದು ನಿರ್ದೇಶಿಸಿತು.
ಇನ್ನು ಮೆಟ್ರೋ ಮಾರ್ಗಕ್ಕಾಗಿ ಈಗಾಗಲೇ ನ್ಯಾಯಾಲಯದ ಅನುಮತಿಯೊಂದಿಗೆ ಸ್ಥಳಾಂತರ ಮಾಡಿರುವ ಮರಗಳನ್ನು ಸರಿಯಾಗಿ ಪೋಷಿಸಬೇಕು ಮತ್ತು ಹೊಸ ಗಿಡಗಳನ್ನು ನೆಡಬೇಕು. ಮರಗಳ ಪೋಷಣೆ ಬಗ್ಗೆ ಕಾಲ ಕಾಲಕ್ಕೆ ವರದಿಗಳನ್ನು ಸಲ್ಲಿಸಬೇಕೆಂದು ಬಿಎಂಆರ್ ಸಿಎಲ್ಗೆ ನಿರ್ದೇಶಿತು.
ಅಭಿವೃದ್ಧಿ ಕಾಮಗಾರಿಗಳಿಗೆ ಮರ ಕಡಿಯುವುದನ್ನು ಪ್ರಶ್ನಿಸಿ ಬೆಂಗಳೂರು ಪರಿಸರ ಸಮಿತಿ ಮತ್ತು ಪರಿಸರವಾದಿ ದತ್ತಾತ್ರೇಯ ಟಿ.ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಎ. ಎಸ್ ಓಕ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರಿದ್ದ ವಿಭಾಗೀಯಪೀಠ ಗುರುವಾರ ವಿಚಾರಣೆ ನಡೆಸಿತು.