ಗದಗ: ಕೊರೊನಾ ಲಸಿಕೆ ಬಗ್ಗೆ ಜನರಿಗೆ ಈಗಲೂ ಅನುಮಾನವಿದೆ. ಲಸಿಕೆ ತೆಗೆದುಕೊಂಡರೆ ಅಡ್ಡಪರಿಣಾಮಗಳಾಗುತ್ತಾ ಎಂಬ ಭಯದಲ್ಲಿದ್ದಾರೆ. ಯಾವುದೇ ಅಡ್ಡಪರಿಣಾಮಗಳಾಲ್ಲ ಅಂತ ಲಸಿಕೆ ಪಡೆದವರು ಹೇಳಿದರೂ, ಅರಿವು ಮೂಡಿಸಿದರೂ ಬಹುತೇಕರು ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಗ್ರಾಮ ಪಂಚಾಯತಿಯೊಂದು ಜನರ ಒಳಿತಿಗಾಗಿ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ. ಯಾರು ವ್ಯಾಕ್ಸಿನ್ ಹಾಕಿಸಿಕೊಳ್ಳುವುದಿಲ್ಲವೋ ಅಂತಹ ಕುಟುಂಬಗಳಿಗೆ ಪಡಿತರ ನೀಡಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕೊರೊನಾ ಹಿನ್ನೆಲೆ ಕೊತಬಾಳ ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ನಡೆಸಿತ್ತು. ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುವವರಿಗೆ ರೇಷನ್ ನೀಡಬಾರದೆಂದು ಸರ್ವಾನುಮತದಿಂದ ಎಲ್ಲ ಸದಸ್ಯರು ನಿರ್ಣಯ ಕೈಗೊಂಡಿದ್ದಾರೆ.
ವ್ಯಾಕ್ಸಿನೇಶನ್ ಹಾಕಿಸಿಕೊಂಡವರಿಗೆ ಆರೋಗ್ಯ ಇಲಾಖೆ ಪತ್ರವೊಂದನ್ನು ನೀಡಲಾಗುತ್ತದೆ. ಪಡಿತರ ಚೀಟಿದಾರರು ತಮ್ಮ ಪಡಿತರ ಕಾರ್ಡ್ನೊಂದಿಗೆ ಆರೋಗ್ಯ ಇಲಾಖೆ ಪತ್ರ ತರಬೇಕು. ವ್ಯಾಕ್ಸಿನ್ ಹಾಕಿಸಿಕೊಂಡಿರುವ ಬಗ್ಗೆ ಪತ್ರ ನೀಡಿದರೆ ಮಾತ್ರ ಅಂತವರಿಗೆ ರೇಷನ್ ನೀಡಲಾಗುತ್ತದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಈ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಒಳ್ಳೆಯದಾಗಿದ್ದು, ನಿರ್ಧಾರ ಮಾಡಿದ ದಿನದಂದೇ ನೂರಕ್ಕೂ ಹೆಚ್ಚು ಗ್ರಾಮಸ್ಥರು ವ್ಯಾಕ್ಸಿನ್ ಪಡೆದಿದ್ದಾರೆ ಎಂಬ ಮಾಹಿತಿ ಇದೆ.