ಧಾರವಾಡ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಧಾರವಾಡ ತಾಲೂಕಿನ ರಾಯಪುರ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ರೈತರ ಸದ್ಯದ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ರು. ಅನ್ನದಾತರ ಜೊತೆ ಹೊಲದಲ್ಲಿಯೇ ಕುಳಿತು ಅವರ ಸಮಸ್ಯೆಗಳನ್ನ ಆಲಿಸಿದರು.
ಸದ್ಯ ಬಿತ್ತನೆ ಕಾರ್ಯ ಆರಂಭವಾಗಿದೆ. ಆದ್ರೆ ನಮಗೆ ಬೇಕಾದ ಬೀಜ ಸಿಗುತ್ತಿಲ್ಲ ಎಂದು ರೈತರು ಹೇಳಿದರು. 5 ಎಕರೆ ಮೇಲೆ ಎಷ್ಟೇ ಜಮೀನು ಇದ್ದರೂ ಸಹ ಸರ್ಕಾರ ಕೇವಲ 5 ಪ್ಯಾಕೆಟ್ ಬೀಜಗಳನ್ನ ಕೊಡುತ್ತಿದೆ. ಗೊಬ್ಬರದ ಸಮಸ್ಯೆ ಜೊತೆ ಬೀಜದ ಸಮಸ್ಯೆ ಹೆಚ್ಚಾಗಿದೆ. ಮೆಣಸಿನಕಾಯಿ, ಟೊಮೇಟೊ ಬೆಳೆದ ರೈತರಿಗೆ ಲಾಭ ಇಲ್ಲ. ಬೆಳೆದಿದ್ದ ಬೆಳೆಯನ್ನ ಎಪಿಎಂಸಿ ಯಿಂದ ಮತ್ತೆ ತರುವ ಸ್ಥಿತಿ ಎದುರಾಗಿದೆ ಎಂದು ರೈತರು ವಿವರಿಸಿದರು.
ನಷ್ಟವಾದ ರೈತನಿಗೆ ಹೇಗೆ ಆನ್ಲೈನ್ನಲ್ಲಿ ಅರ್ಜಿ ಹಾಕಬೇಕು ಅಂತ ಗೊತ್ತಿಲ್ಲ ಎಂದು ರೈತರು ಹೇಳಿದಾಗ, ನನಗೆ ಗೊತ್ತಿಲ್ಲ ಹೇಗೆ ಹಾಕಬೇಕು ಅಂತ ಎಂದು ಡಿಕೆ ಶಿವಕುಮಾರ್ ಹೇಳಿದ್ರು. ಕ್ಯಾರೆಟ್ ಕೆ.ಜಿಗೆ 5 ರೂಪಾಯಿಯಂತೆ ಹೋಗ್ತಿಲ್ಲ ಸರ್. ಮೊದಲು ಕೆ.ಜಿಗೆ 40 ರೂಪಾಯಿ ಇತ್ತು ಎಂದು ರೈತರು ಹೇಳಿದ್ರು. ಮೊನ್ನೆ ಆಗಿರುವ ಪ್ಯಾಕೇಜ್ ನಿಮಗೆ ಏನಾದ್ರು ಬಂದಿದ್ಯಾ ಎಂದು ರೌತರನ್ನ ಶಿವಕುಮಾರ್ ಕೇಳಿದಾಗ, ಈವರೆಗೂ ಯಾವುದೇ ಹಣ ಸರ್ಕಾರದಿಂದ ಸಿಕ್ಕಿಲ್ಲ ಎಂದು ರೈತರು ಹೇಳಿದ್ರು.