ಕೊಪ್ಪಳ: ಕೊರೊನಾ ಸೋಂಕನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ 17 ರಿಂದ 21ರ ವರೆಗೆ ಅಂದರೆ ಐದು ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಘೋಷಣೆಯಾಗಿದೆ. ಹೀಗಾಗಿ ಯಾವುದೇ ಆಟೋಗಳು ಜಿಲ್ಲೆಯಲ್ಲಿ ಓಡಾಡುತ್ತಿಲ್ಲ. ಇದರಿಂದ ಅಜ್ಜಿಯೊಬ್ಬರು ಊರಿಗೆ ತೆರಳಲು ಪರದಾಟ ಪಟ್ಟಿದ್ದಾರೆ. ಸಿದ್ದಮ್ಮ ಎಂಬ ವೃದ್ಧೆ ಕೊಪ್ಪಳದಿಂದ ತಳಕಲ್ಗೆ ಹೋಗಬೇಕಿತ್ತು. ಆದರೆ ಊರಿಗೆ ತೆರಳಲು ಬಸ್, ಆಟೋಗಳಿಲ್ಲದೆ ಅಜ್ಜಿಗೆ ದಿಕ್ಕು ತೋಚದಂತಾಗಿತ್ತು. ನಿನ್ನೆ ರಾತ್ರಿ ಅಜ್ಜಿಯ ಪತಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಗವಿ ಮಠದ ವೃದ್ಧಾಶ್ರಮಕ್ಕೆ ದಾಖಲಾಗಿದ್ದರು. ಆದರೆ ಅಜ್ಜಿಗೆ ಮನೆಗೆ ಹೋಗಿ ಎಂದು ವೈದ್ಯರು ಹೇಳಿದ್ದರು.
ಪತಿ ಭೀಮಯ್ಯಗೆ ಕೊರೊನಾ ಹಿನ್ನೆಲೆ ಕೊಪ್ಪಳಕ್ಕೆ ಸಿದ್ದಮ್ಮ ಬಂದಿದ್ದರು. ಗವಿ ಮಠದ ವೃದ್ಧಾಶ್ರಮದಲ್ಲಿ ಪತಿ ಭೀಮಯ್ಯ ಇದ್ದಾರೆ. ನೀವು ಮನೆಗೆ ಹೋಗಿ ಎಂದು ಸಿದ್ದಮ್ಮಳನ್ನು ವೈದ್ಯರು ಕಳುಹಿಸಿದ್ದರು. ಆದರೆ ಮನೆಗೆ ತೆರಳಲು ವಾಹನಗಳಿಲ್ಲದೆ ಅಜ್ಜಿ ಸಿದ್ದಮ್ಮ ಪರದಾಟ ಪಡುತ್ತಿದ್ದರು. ಈ ವೇಳೆ ವಾಹನ ಇಲ್ಲದೆ ಪರದಾಡುತ್ತಿದ್ದ ಸಿದ್ದಮ್ಮನನ್ನು ಟಾಟಾ ಏಸ್ ವಾಹನದಲ್ಲಿ ತಳಕಲ್ ಗ್ರಾಮಕ್ಕೆ ಪೊಲೀಸರು ಕಳುಹಿಸಿದ್ದಾರೆ.
ಜಿಲ್ಲೆಯಲ್ಲಿ ಮೂರನೇ ದಿನಕ್ಕೆ ಸಂಪೂರ್ಣ ಲಾಕ್ಡೌನ್ ಕಾಲಿಟ್ಟಿದೆ. ಹೀಗಾಗಿ ಕೊಪ್ಪಳ ಸಂಪೂರ್ಣ ಸ್ತಬ್ಧವಾಗಿದೆ. ವಾಹನಗಳ ಸಂಖ್ಯೆ ವಿರಳವಾಗಿದೆ. ಕೇವಲ ಅಗತ್ಯ ವಸ್ತುಗಳ ಸೇವೆಗೆ ಮಾತ್ರ ಅವಕಾಶ ನೀಡಿ ಅನಗತ್ಯವಾಗಿ ಓಡಾಡುತ್ತಿರುವ ವಾಹನಗನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಈ ನಡುವೆ ಕೊಪ್ಪಳ ನಗರದ ಗಂಜ್ ವೃತ್ತದಲ್ಲಿ ತಂದೆ, ಮಗಳು ನಾಯಿಯೊಂದಿಗೆ ವಾಕಿಂಗ್ ಬಂದಿದ್ದರು. ಈ ವೇಳೆ ಲಾಕಡೌನ್ ಇರುವುದು ಗೊತ್ತಿಲ್ವಾ ಅಂತ ಪೊಲೀಸರು ಪ್ರಶ್ನಿಸಿದ್ದಾರೆ. ಪೊಲೀಸರ ಚಾರ್ಜ್ಗೆ ಹೆದರಿ ತಂದೆ ಮತ್ತು ಮಗಳು ನಾಯಿಯೊಂದಿಗೆ ಮನೆಗೆ ಹೋದರು.