ಮಂಗಳೂರು: ಇಂದು ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಮೇ 13ರಂದು ಗುರುವಾರವೇ ರಂಜಾನ್ ಹಬ್ಬ ಆಚರಿಸುವಂತೆ ಉಳ್ಳಾಲ ಖಾಜಿ ಸೈಯದ್ ಕೂರತ್ ತಂಗಲ್ ಘೋಷಿಸಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ದುಬೈನಲ್ಲಿ ಗುರುವಾರದಂದು ರಂಜಾನ್ ಹಬ್ಬ ಆಚರಿಸಲಾಗುತ್ತದೆ.
ಈ ಬಾರಿ ಕೊವಿಡ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕಾರಣ ಈದುಲ್ ಫಿತ್ರ್ ಹಬ್ಬವನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸಬೇಕು. ಅತ್ಯಂತ ಸರಳವಾಗಿ ಆಚರಿಸಬೇಕು. ಬಡವರಿಗೆ ಹೆಚ್ಚಿನ ದಾನ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಝ್ ಅಹ್ಮದ್ ಮುಸ್ಲಿಯರ್ ಕರೆ ನೀಡಿದ್ದಾರೆ.
ಪವಿತ್ರ ಹಬ್ಬದ ಸಂಭ್ರಮಾಚರಣೆಯ ಸಮಯದಲ್ಲೇ ಕೊವಿಡ್ ಸೋಂಕು ಸಹ ಇರುವುದರಿಂದ ಹಬ್ಬದ ಆಚರಣೆ ಸೋಂಕಿನ ಹೆಚ್ಚಳ ಆಗಬಾರದು. ಎಲ್ಲರೂ ಮನೆಯಲ್ಲಿಯೇ ಬೆಳಗಿನ ಪ್ರಾರ್ಥನೆ ಸಲ್ಲಿಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್ನ್ ಒಂಬತ್ತನೇ ತಿಂಗಳು, ಮತ್ತು ಇಸ್ಲಾಮಿಕ್ ನಂಬಿಕೆಗಳ ಪ್ರಕಾರ, ರಂಜಾನ್ ತಿಂಗಳಲ್ಲಿ ಪವಿತ್ರ ಕುರಾನ್ ಅನ್ನು ಪ್ರವಾದಿ ಮುಹಮ್ಮದ್ ಅವರಿಗೆ ಬಹಿರಂಗಪಡಿಸಲಾಯಿತು ಎಂದು ಹೇಳಲಾಗುತ್ತದೆ. ಈ ಪವಿತ್ರ ಹಬ್ಬವನ್ನು ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುತ್ತಾರೆ. ಜನರು ಮಸೀದಿಗಳಲ್ಲಿ ಒಟ್ಟುಗೂಡುತ್ತಾರೆ ಮತ್ತು ಈ ದಿನದಂದು ಸರ್ವಶಕ್ತನಾದ ಅಲ್ಲಾಹ್ಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧನೆಗಳನ್ನು ಹೇರಲಾಗಿದ್ದು ಈ ಸಂಭ್ರಮಕ್ಕೆ ಕೊಂಚ ತಡೆ ಬಿದ್ದಿದೆ.