ಬೆಂಗಳೂರು: ನಗರದಲ್ಲಿ ಇಂದು ಮಹಿಳೆಯೊಬ್ಬರು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಬೆಡ್ ಸಿಕ್ಕರೂ ಆಕೆಯ ಗಂಡ ಆಯಂಬುಲೆನ್ಸ್ನಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಹೆಚ್ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಇದಕ್ಕೆಲ್ಲಾ ರಾಜ್ಯ ಸರ್ಕಾರವೇ ಉತ್ತರ ಕೊಡಬೇಕು ಎಂದಿದ್ದಾರೆ.
ನ್ಯೂಸ್ಫಸ್ಟ್ ಜೊತೆ ಮಾತನಾಡಿದ ಹೆಚ್ಡಿಕೆ, ಇದೊಂದು ದರಿದ್ರ ಸರ್ಕಾರ. ಯಾವುದೇ ಮುನ್ನೆಚ್ಚರಿಕೆ ವಹಿಸದ ದರಿದ್ರ ಸರ್ಕಾರ ಎಂದು ಹರಿಹಾಯ್ದರು. ಮೊನ್ನೆ ಎಲ್ಲಾ ಬೆಡ್ ಬ್ಲಾಕ್ ಬಗ್ಗೆ ಪ್ರದರ್ಶನ ಕೊಟ್ಟರು. ಮುಸ್ಲಿಮ್ ಸಿಬ್ಬಂದಿ ಇದ್ದಾರೆಂದು ಚಿಲ್ಲರೆ ರಾಜಕಾರಣ ಮಾಡಿದ್ರು. ಬಾಹುಬಲಿ ರೀತಿ ಯುವ ಸಂಸದ ಪ್ರಚಾರ ಪಡೆದುಕೊಂಡ ಎಂದು ತೇಜಸ್ವಿ ಸೂರ್ಯ ವಿರುದ್ಧ ಕಿಡಿ ಕಾರಿದ್ರು.
ಬೆಡ್ ಬ್ಲಾಕ್ ಆಗಿದ್ರೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಸಿಎಂ ಕೊರೊನಾದಿಂದ ಆಸ್ಪತ್ರೆ ಸೇರಿದ್ದಾಗ ಮೂವರು ಮಂತ್ರಿಗಳು ಅವರವರೇ ಸಭೆ ಮಾಡಿಕೊಂಡರು. ಆ ಮಂತ್ರಿಗಳೇ ಸೇರಿಕೊಂಡು ಬೆಡ್ ಬ್ಲಾಕ್ ಮಾಡಿಕೊಂಡ್ರು. ಬಿಜೆಪಿ ಎಂಎಲ್ಎಗಳಿಗೆ ಬೇಕೆಂದು ಬೆಡ್ ಬ್ಲಾಕ್ ಮಾಡಿದ್ರು. ಇವತ್ತು ಬೆಡ್ ಬ್ಲಾಕ್ ಆಗಲು ಈ ಮಂತ್ರಿಗಳೇ ಕಾರಣ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ರು. ಈ ವಿಚಾರವನ್ನ ಯಾರಾದ್ರು ಬಿಬಿಎಂಪಿ ಅಧಿಕಾರಿ ಬಾಯಿಬಿಟ್ರಾ? ಅಂತ ಪ್ರಶ್ನಿಸಿದ್ರು
ಅಗಲ್ಲ ಅಂದ್ರೆ ನಮ್ಮ ಸಲಹೆಯಾದ್ರೂ ಪಡೀಬೇಕಿತ್ತು..
ಈ ಸರ್ಕಾರಕ್ಕೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ. ಅಗಲ್ಲ ಅಂದ್ರೆ ನಮ್ಮ ಸಲಹೆಯಾದ್ರೂ ಪಡೀಬೇಕಿತ್ತು. ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ಹಬ್ಬಿ ಹೋಗಿದೆ. ಬರೀ ವೈದ್ಯರನ್ನು ದೂರಿದರೆ ಏನು ಪ್ರಯೋಜನ? ಇದಕ್ಕೆಲ್ಲಾ ನಾವು ಮಾಡಿರುವ ವ್ಯವಸ್ಥೆಯೇ ಕಾರಣ. ಚುನಾವಣೆ ಮಾಡು, ಆ ರಾಜ್ಯ ಈ ರಾಜ್ಯ ನೋಡು ಇದೇ ಆಯಿತು ಎಂದು ಹೆಚ್ಡಿಕೆ ಬೇಸರ ಹೊರಹಾಕಿದ್ರು.
ರಾಜ್ಯಕ್ಕೆ ಈ ಸ್ಥಿತಿ ಬರುತ್ತೆಂದು ಕನಸಲ್ಲೂ ಅನ್ನಿಸಿರಲಿಲ್ಲ. ಲಾಕ್ಡೌನ್ ಮಾಡಿ ಎಂದು ಮಾರ್ಚ್ 15ರಂದೇ ಹೇಳಿದ್ದೆ. ಮಹಾರಾಷ್ಟ್ರದಲ್ಲಿ ಇದಕ್ಕಿಂತಲೂ ಹೆಚ್ಚು ಕೇಸ್ ಬರುತ್ತಿತ್ತು, ಲಾಕ್ಡೌನ್ ಮಾಡಿದ್ರು. ಮಹಾರಾಷ್ಟ್ರದಲ್ಲಿ ಸೋಂಕು ನಿಯಂತ್ರಣಕ್ಕೆ ಬಂತು. ನಾಡಿನ ಜನತೆ ರಕ್ಷಣೆಗಿಂತ ಇವರಿಗೆ ಸ್ವಾರ್ಥ ಮುಖ್ಯ. ಈ ಪರಿಸ್ಥಿತಿಗೆ ತಳ್ಳಿದ್ದಕ್ಕೆ ಸರ್ಕಾರಕ್ಕೆ ಪಶ್ಚಾತ್ತಾಪವಿಲ್ಲ. ಈ ಸ್ಥಿತಿಗೆ ತಂದು ಮನೆಯಲ್ಲಿ ಅನ್ನ ಹೇಗೆ ತಿಂತಾರೆ? ಎಂದು ಕುಟುಕಿದ್ರು.
ಕನಿಷ್ಠ ಮಂತ್ರಿಗಳೆಲ್ಲಾ ಕುಳಿತು ಚರ್ಚಿಸಬೇಕಿತ್ತು. ಎಲ್ಲಿ ಹೇಗೆ ದುಡ್ಡು ಹೊಡೆಯುವುದೆಂದು ಯೋಚಿಸ್ತಾರೆ. ಇವರ ಯೋಗ್ಯತೆಗೆ, ಇದು ಈ ಸರ್ಕಾರದ ಸಾಧನೆ. ಮನುಷ್ಯತ್ವ ಇಲ್ಲದ ಭ್ರಷ್ಟ ರಾಜ್ಯ ಸರ್ಕಾರ ಇದು. ಈಗಲೂ ಕಾಲ ಮಿಂಚಿಲ್ಲ, ವ್ಯವಸ್ಥೆ ಸರಿಪಡಿಸಿಕೊಳ್ಳಲಿ. ಸರಿಯಾದ ವ್ಯಕ್ತಿಗಳನ್ನು ಕೂರಿಸಿಕೊಂಡು ಪ್ಲಾನ್ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದ್ರು.