ಬೆಂಗಳೂರು: ಕರ್ನಾಟಕ ಸರ್ಕಾರ ಆದೇಶ ಹೊರಡಿಸಿರುವ ಪ್ರಕಾರ ಇವತ್ತು ರಾತ್ರಿ 9 ಗಂಟೆಯಿಂದ ಹೊಸ ಗೈಡ್ ಲೈನ್ಸ್ ಜಾರಿಯಲ್ಲಿ ಇರುತ್ತೆ. ಈ ಮಾರ್ಗಸೂಚಿ ಪ್ರಕಾರ, ಬೆಳಗ್ಗೆ 6 ಗಂಟೆಯಿಂದ ಹತ್ತು ಗಂಟೆವರೆಗೂ ಅಗತ್ಯ ವಸ್ತುಗಳು ಖರೀದಿಗೆ ಅವಕಾಶ ನೀಡಲಾಗಿದೆ. ಹೋಮ್ ಡಿಲಿವರಿಗೆ ಅವಕಾಶ, ಇ ಕಾಮರ್ಸ್ ಗೆ ಅವಕಾಶ ಕಲ್ಪಿಸಲಾಗಿದೆ. ಬಾರ್, ಪಬ್ಗಳಲ್ಲಿ ಮದ್ಯ ಪಾರ್ಸಲ್ ಗೆ ಅವಕಾಶ ಇದೆ. ಹತ್ತು ಗಂಟೆಯ ಬಳಿಕ ಯಾವುದೇ ಅಂಗಡಿ ಓಪನ್ ಇರಲ್ಲ. ದೇವಸ್ಥಾನ ಯಾವುದೂ ಓಪನ್ ಇರಲ್ಲ. ಹೊರ ರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಟ್ರಾವೆಲ್ ಟಿಕೆಟ್ ತೋರಿಸಿ, ಓಡಾಡಲು ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್ ಕಮಲ ಪಂಥ್ ಅವರು, ಅನುಮತಿ ಇರುವ ಕಂಪನಿ ಉದ್ಯೋಗಿಗಳ ಬಳಿ ಐಡಿ ಕಾರ್ಡ್ ಕಡ್ಡಾಯ. ಒಂದು ವೇಳೆ ದುರುಪಯೋಗ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು. ಮದುವೆ ಸಮಾರಂಭದಲ್ಲಿ ಐವತ್ತು ಮಂದಿ ಭಾಗವಹಿಸಲು ಅವಕಾಶ ನೀಡಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿ ಇರುತ್ತೆ. ಏರ್ಪೋರ್ಟ್ಗೆ ಹೋಗುವರಿಗೆ ಅವಕಾಶ ನೀಡಲಾಗಿದೆ. ಹಾಗೆಯೇ ರಾತ್ರಿ ಪಾಳಿಯ ಐಟಿ ಉದ್ಯೋಗಿಗಳ ಐಡಿ ಕಾರ್ಡ್ಅನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಿದರು.
ಮೇ 12 ತಾರೀಖಿನವರೆಗೂ ಕೋವಿಡ್ ರೂಲ್ಸ್ ಫಾಲೋ ಮಾಡ್ಬೇಕು. ರೈತರಿಗೆ ಯಾವುದೇ ಸಮಸ್ಯೆ ಇಲ್ಲ. ಗೂಡ್ಸ್ ವಾಹನಗಳಿಗೆ ಅವಕಾಶ ಇದೆ. ಹೂ- ಹಣ್ಣು, ತರಕಾರಿ ಮಾರುಕಟ್ಟೆಗೆ ತರಲು ಸಮಸ್ಯೆ ಇಲ್ಲ. ಮದುವೆಗೆ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು. ನಾವು ಕ್ಲಿಯರೆನ್ಸ್ ಕೊಡುತ್ತೇವೆ. ಅಗತ್ಯ ವಸ್ತುಗಳ ಖರೀದಿ ವೇಳೆ ಸಾಮಾಜಿಕ ಅಂತರ ಪರಿಪಾಲನೆ ಜವಾಬ್ದಾರಿ ಆ ಅಂಗಡಿ ಮಾಲೀಕರದ್ದೇ. ಕೆ ಆರ್ ಮಾರುಕಟ್ಟೆಯಲ್ಲಿ ನಿಯಮ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಮಾತಾಡಿದ್ದೀನಿ ಎಂದು ಮಾಹಿತಿ ನೀಡಿದರು.
ವೀಕೆಂಡ್ ಕರ್ಫ್ಯೂ ಯಾವ ರೀತಿ ಸಿದ್ದತೆ ಇತ್ತೋ ಅದೇ ರೀತಿ ಮುಂದಿನ ಹದಿನೈದು ದಿನ ಇರುತ್ತೆ. ಅನಗತ್ಯವಾಗಿ ಓಡಾಡಿದರೆ ಗಾಡಿ ಸೀಜ್ ಮಾಡಲಾಗುತ್ತದೆ. ಅನಗತ್ಯವಾಗಿ ಯಾರೂ ಓಡಾಡಬಾರದು. ಓಡಾಡಿದರೆ ಅವರ ವಿರುದ್ದ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದರು.