ಜೈಪುರ್: ರಾಜಸ್ಥಾನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಅಲ್ಲಿಯ ರಾಜ್ಯ ಸರ್ಕಾರ, ಇವತ್ತಿಂದ ಮೇ. 3 ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.
ಈ ಲಾಕ್ ಡೌನ್ ಅವಧಿಯನ್ನು ‘ಜನ ಅನುಷನ್ ಪಖ್ವಾರ’ (ಸಾರ್ವಜನಿಕ ಶಿಸ್ತಿನ ಹದಿನೈದು ದಿನಗಳ) ಎಂದು ಹೇಳಲಾಗಿದ್ದು, ಎಲ್ಲಾ ವಾಣಿಜ್ಯ ಸಂಸ್ಥೆಗಳು, ಕಚೇರಿಗಳು ಮತ್ತು ಮಾರುಕಟ್ಟೆಗಳು ಮುಚ್ಚಿರುತ್ತವೆ. ಆದರೆ ಅಗತ್ಯ ಸೇವೆಗಳಿಗೆ ಲಾಕ್ ಡೌನ್ ನಿಂದ ರಿಯಾಯಿತಿ ನೀಡಲಾಗಿದೆ.
ಬ್ಯಾಂಕುಗಳು, ಡೈರಿ ಅಂಗಡಿಗಳು, ಕಿರಾಣಿ ಅಂಗಡಿಗಳು ಮತ್ತು ಫಾರ್ಮಸಿಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗಿದೆ.
ಸಂಜೆ 7 ಗಂಟೆಯವರೆಗೆ ತರಕಾರಿ, ಹಣ್ಣು, ಹಾಲು ಮತ್ತು ಕಿರಾಣಿ ವಸ್ತುಗಳನ್ನು ಮಾರಾಟ ಮಾಡಲು ಅಂಗಡಿಗಳಿಗೆ ಅವಕಾಶ ನೀಡಿದೆ.
ಎಲ್ ಪಿಜಿ, ಅನಿಲ, ಪೆಟ್ರೋಲ್ ಪಂಪ್ ಸೇವೆಗಳು, ಸಿಹಿ ಅಂಗಡಿಗಳು ಮತ್ತು ಆಹಾರವನ್ನು ರಾತ್ರಿ 8 ಗಂಟೆಯವರೆಗೆ ಹೋಮ್ ಡೆಲಿವರಿ ಗೆ ಅವಕಾಶ ನೀಡಲಾಗಿದೆ.
ವಲಸೆ ಕಾರ್ಮಿಕರ ಹಿತದೃಷ್ಟಿಯಿಂದ ಲಾಕ್ ಡೌನ್ ಸಮಯದಲ್ಲಿ ಕೈಗಾರಿಕಾ ಘಟಕಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮ ಉದ್ಯೋಗಿಗಳು ತಮ್ಮ ಗುರುತಿನ ಚೀಟಿಗಳನ್ನು ತೋರಿಸಿ ತಮ್ಮ ಕೆಲಸದ ನಿರ್ವಹಣೆ ಮಾಡಬಹದು. ರೈಲು, ಬಸ್ ಅಥವಾ ವಿಮಾನದಲ್ಲಿ ಪ್ರಯಾಣಿಸುವವರಿಗೆ ತಮ್ಮ ಪ್ರಯಾಣದ ಟಿಕೆಟ್ ಗಳನ್ನು ತೋರಿಸಿ ಹೋಗಲು ಅನುಮತಿನೀಡಲಾಗುವುದು.
ರಾಜಸ್ಥಾನದಲ್ಲಿ ಭಾನುವಾರ ೧೦,೦೦೦ ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ಮತ್ತು 42ಸಾವುಗಳು ವರದಿಯಾಗಿವೆ. ಇದರಲ್ಲಿ ಸುಮಾರು 2000 ಪ್ರಕರಣಗಳು ಜೈಪುರದಲ್ಲೇ ದಾಖಲಾಗುವೆ. ರಾಜಸ್ಥಾನದಲ್ಲಿ ಸಧ್ಯಕ್ಕೆ 67,387 ಸಕ್ರಿಯ ಪ್ರಕರಣಗಳಿವೆ.