ಬೆಂಗಳೂರು: ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಆಸ್ಪತ್ರೆಗಳಿವೆ. ದೇಶದಲ್ಲೇ ತಜ್ಞವೈದ್ಯರು ನಮ್ಮಲ್ಲಿದ್ದಾರೆ ಹಾಗಿದ್ದರೂ ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದ ಸರ್ಕಾರ ಕೈಚೆಲ್ಲಿ ಕೂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಡಿಕೆಎಸ್ ಸರ್ಕಾರಕ್ಕೆ ಯಾವುದೇ ಸರಿಯಾದ ಯೋಜನೆ ಇಲ್ಲ. ಹೋಟೆಲ್ಗಳನ್ನ ವಶಕ್ಕೆ ಪಡೆದು 10 ಸಾವಿರ ಬೆಡ್ಗಳನ್ನ ಮಾಡಿದ್ರು. ಆದರೂ ರಾಜ್ಯಲ್ಲಿ ಬೆಡ್ ಇಲ್ಲ. ರೆಮ್ಡೆಸಿವಿರ್ ಇಂಜೆಕ್ಷನ್ ಸಿಗ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗ್ತಿಲ್ಲ ಅಧಿಕಾರಿಗಳು ಏನು ಮಾಡ್ತಿದ್ದಾರೆ? ಆಸ್ಪತ್ರೆಗಳಿಗೆ ಎಷ್ಟು ಅಧಿಕಾರಿಗಳು ಭೇಟಿ ಮಾಡಿದ್ದಾರೆ? ಸಚಿವರು ರಾಜ್ಯದ ಎಷ್ಟು ಕಡೆ ಭೇಟಿ ಮಾಡಿದ್ದಾರೆ? ಚಾಲಕರ ಸಮುದಾಯಕ್ಕೆ ಯಾವ ಪರಿಹಾರ ಕೊಟ್ಟಿದ್ದೀರ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಯಾರಿಗೂ ನಯಾ ಪೈಸೆ ಸಹಾಯ ಮಾಡಿಲ್ಲ. ಜಿಮ್ಗಳು ನಿಂತು ಹೋಗಿವೆ, ವ್ಯಾಪಾರ ಬಿದ್ದುಹೋಗ್ತಿದೆ. ಜನರ ಆರೋಗ್ಯ ಹದಗೆಡುತ್ತಿದೆ. ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ಆತಂಕವಾಗಿದೆ. ಸರ್ಕಾರ ಧೈರ್ಯ ತುಂಬುವ ಕೆಲಸ ಮಾಡ್ತಿದ್ಯಾ? ಎಂದು ಕಿಡಿಕಾರಿದ್ದಾರೆ.
ಜಿಲ್ಲಾ ಮಂತ್ರಿಗಳು ಎಷ್ಟು ಮೀಟಿಂಗ್ ಮಾಡಿದ್ದೀರಾ? ಕಷ್ಟದಲ್ಲಿರುವವರಿಗೆ ಎಷ್ಟು ಸಹಾಯ ಮಾಡಿದ್ರಿ? ಸವಿತಾ ಸಮಾಜ, ಕ್ಯಾಬ್ ಡ್ರೈವರ್ಗಳಿಗೆ ಎಷ್ಟು ಪರಿಹಾರ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಲಾಕ್ಡೌನ್ ಮಾಡಿದ್ರು ಫಾಲೋ ಮಾಡಿದ್ವಿ, ಇಷ್ಟೆಲ್ಲ ಮಾಡಿದ್ರೂ ಕೊರೊನಾವನ್ನ ನಿಯಂತ್ರಣ ಮಾಡೋಕೆ ಆಗ್ತಿಲ್ಲ. ಜನರ ಆತಂಕವನ್ನ ಸರ್ಕಾರ ಹೇಗೆ ನಿರ್ವಹಿಸಬೇಕು? ಕಳೆದ ಒಂದು ವರ್ಷ ಸರ್ಕಾರಕ್ಕೆ ನಾವು ಸಹಕಾರ ಕೊಟ್ಟಿದ್ದೇವೆ. ಈಗ ಆರೋಗ್ಯ ಸಚಿವರು ಕೈಮೀರಿ ಹೋಗಿದೆ ಅಂತ ಹೇಳ್ತಿದ್ದಾರೆ. ಇವತ್ತಿನ ಪರಿಸ್ಥಿತಿ ನೆನೆದರೆ ಏನಾಗಬೇಡ? ಸರ್ಕಾರ ಇದ್ಯೋ ಇಲ್ವೋ ಗೊತ್ತಾಗ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನ ಮಂತ್ರಿಗೆ ಜನರ ಆರೋಗ್ಯ ಬೇಕಿಲ್ಲ. ವೋಟ್ ಕೊಡಿ ಅಂತ ಪ್ರಚಾರಕ್ಕೆ ಒತ್ತು ನೀಡುತ್ತಿದ್ದಾರೆ. ಜನರ ಆರೋಗ್ಯಕ್ಕಿಂತ ಚುನಾವಣೆಯೇ ಇವರಿಗೆ ಮುಖ್ಯವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ಹಣವನ್ನ ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೆ ಯಾರಿಗೆ ಆ ಹಣ ಸಿಕ್ಕಿದೆ? ಜಿಎಸ್ಟಿ ಕಟ್ಟುವ ದುಡ್ಡಿಗೂ ಪೆನಾಲ್ಟಿ ಹಾಕ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಸಿಮೆಂಟ್, ಗೊಬ್ಬರದ ಬೆಲೆ ಗಗನಕ್ಕೆ ಹೋಗಿದೆ. ರೈತರು ಪರದಾಡುತ್ತಿದ್ದಾರೆ. ಹೆಣ್ಮಕ್ಕಳು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಸರ್ಕಾರ ಯಾವ ಸಹಾಯಧನ ನೀಡ್ತಿದೆ? ಸರ್ಕಾರ ಜನರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಸರಿಯಾದ ಮಾರ್ಗಸೂಚಿಗಳನ್ನ ತರಬೇಕು, ಶಿಕ್ಷಣ ವಿಚಾರದಲ್ಲಿ ಹೆಚ್ಚಿನ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.