ಪಟನಾ: ಎಲ್ಲಿ ನಮ್ಮನೆಲ್ಲ ಹಿಡಿದು ಕರೊನಾ ವೈರಸ್ ಟೆಸ್ಟ್ ಮಾಡಿಸುತ್ತಾರೋ ಎಂಬ ಭಯದಲ್ಲಿ ಮಕ್ಕಳು, ಯುವಕರು ಸೇರಿದಂತೆ ಅನೇಕರು ರೈಲು ನಿಲ್ದಾಣದಲ್ಲಿ ಯರ್ರಾಬಿರ್ರಿ ಓಡಿದ ಘಟನೆ ಬಿಹಾರದ ಬುಕ್ಸರ್ನಲ್ಲಿ ಗುರುವಾರ ನಡೆದಿದೆ.
ರೈಲು ಇಳಿದು ನಿಲ್ದಾಣದಿಂದ ಹೊರ ಹೋಗುವ ಮುಂಚೆ ಕರೊನಾ ಟೆಸ್ಟ್ ಮಾಡಿಸಲು ಅಲ್ಲಿನ ಆರೋಗ್ಯ ಕಾರ್ಯಕರ್ತರು ಕೇಳಿದಾಗ, ಟೆಸ್ಟ್ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಜನರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲು ನಿಲ್ದಾಣಗಳಲ್ಲಿ ಟೆಸ್ಟಿಂಗ್ ಮಾಡುವಂತೆ ಇತ್ತೀಚೆಗಷ್ಟೇ ಬಿಹಾರ ಸಿಎಂ ನಿತೀಶ್ ಕುಮಾರ್ ಸೂಚನೆ ನೀಡಿದ್ದಾರೆ. ದೇಶದ ವಿವಿಧ ಭಾಗಗಳಿಂದ ತವರಿಗೆ ಬರುವ ಜನರ ಪರೀಕ್ಷೆ ಮಾಡಬೇಕೆಂದು ನಿತೀಶ್ ಅವರು ಹೇಳಿದ್ದರು. ಆದರೆ, ಜನರು ಕರೊನಾ ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಅವರಲ್ಲಿರುವ ಭಯವೇ ಕಾರಣ ಎನ್ನಲಾಗಿದೆ.
ನಾವು ಜನರನ್ನು ನಿಲ್ಲಿಸಲು ಯತ್ನಿಸಿದಾಗ ಅವರು ನಮ್ಮೊಂದಿಗೆ ವಾಗ್ವಾದಕ್ಕೆ ಇಳಿದರು. ಅಲ್ಲಿ ಯಾವೊಬ್ಬ ಪೊಲೀಸ್ ಸಹ ಇರಲಿಲ್ಲ. ಇದಾದ ಬಳಿಕ ಮತ್ತೊಬ್ಬ ಮಹಿಳಾ ಪೊಲೀಸ್ ಬಂದರು. ಆದರೆ ಒಬ್ಬಳೇ ಇದ್ದಿದ್ದರಿಂದ ನಾನು ಅಸಹಾಯಕನೆಂದರು ಎಂದು ಬುಕ್ಸರ್ನ ಸ್ಥಳೀಯ ಕೋವಿಡ್ ಸಮಾಲೋಚಕ್ ಜೈ ತಿವಾರಿ ಹೇಳಿದರು.
ಬಿಹಾರದಲ್ಲೂ ಸಹ ದಿನೇ ದಿನೆ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುಕ್ರವಾರವಷ್ಟೇ ನಿತೀಶ್ ಕುಮಾರ್ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಇನ್ನು ಬಿಹಾರದಲ್ಲಿ 6253 ಹೊಸ ಪ್ರಕರಣಗಳು ಮತ್ತು 13 ಹೊಸ ಸಾವಿನ ಪ್ರಕರಣಗಳು ವರದಿಯಾಗಿವೆ.