ಬೆಂಗಳೂರು, ಮಾರ್ಚ್ 05: ಕೊರೊನಾ ಸೋಂಕಿನಿಂದಾಗಿ ನಷ್ಟ ಅನುಭವಿಸಿರುವ ಸಾರಿಗೆ ವಲಯಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಸ್ತುತ ಸಾಲಿನ ಬಜೆಟ್ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
2021-22ರ ಸಾಲಿನಲ್ಲಿ 7,515 ಕೋಟಿ ರೂ. ಆದಯಾ ಸಂಗ್ರಹಣೆಯ ಗುರಿಯನ್ನು ಹಾಕಲಾಗಿದೆ. ಈ ವರ್ಷ ರಾಜ್ಯದಲ್ಲಿ 52 ಬಸ್ ನಿಲ್ದಾಣ, 16 ಬಸ್ ಘಟಕಗಳ ನಿರ್ಮಾಣಕ್ಕೆ ಬಜೆಟ್ನಲ್ಲಿ ಪ್ರಸ್ತಾಪ ಮಾಡಲಾಗಿದೆ.
2020-21ರ ಹಣಕಾಸು ವರ್ಷದಲ್ಲಿ ಸಾರಿಗೆ ಇಲಾಖೆ 7,115 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿತ್ತು. ಆದರೆ ಜನವರಿ ಅಂತ್ಯಕ್ಕೆ 4,294 ಕೋಟಿ ರೂ. ಮಾತ್ರ ಆದಾಯ ಸಂಗ್ರಹವಾಗಿದೆ.
ಸಿಎಂ ಯಡಿಯೂರಪ್ಪ ಅವರು ಮಹಿಳೆಯರಿಗೆ ಬಿಎಂಟಿಸಿ ಬಸ್ಪಾಸ್ನಲ್ಲಿ ರಿಯಾಯಿತಿ ನೀಡುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಪ್ರಸ್ತುತ ಸಾಲಿನ ಬಜೆಟ್ ಮಂಡಿಸಿದ್ದು, ಆಗಸ್ಟ್ ತಿಂಗಳೊಳಗೆ ಒಂದು ರಾಷ್ಟ್ರ ಒಂದು ಕಾರ್ಡ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ಮೆಟ್ರೋ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಲ್ಲಿ ಈ ಕಾರ್ಡ್ ಬಳಕೆ ಮಾಡಬಹುದಾಗಿದೆ. ಇದರಿಂದಾಗಿ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಎರಡರಲ್ಲೂ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
ಕೇವಲ ಕರ್ನಾಟಕದ ಮೆಟ್ರೋ ಮಾತ್ರವಲ್ಲದೆ ದೇಶದಲ್ಲಿರುವ ಇನ್ಯಾವುದೇ ರಾಜ್ಯದ ಮೆಟ್ರೋದಲ್ಲಿ ಬೇಕಾದರೂ ಈ ಕಾರ್ಡ್ಗಳನ್ನು ಬಳಸಬಹುದಾಗಿದೆ.ಈ ಕಾರ್ಡಿನ ಸಹಾಯದಿಂದಾಗಿ ಸಾರ್ವಜನಿಕರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುತ್ತದೆ.