ಹೊಸನಗರ: ತಾಲ್ಲೂಕಿನಲ್ಲಿ ಲೋಕಸಭಾ ಚುನಾವಣೆಯ ರಂಗು ಹೆಚ್ಚುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಗಟ್ಟಿಗೊಳ್ಳುತ್ತಿದೆ. ಗ್ರಾಮಗಳ ಮೂಲ ಸೌಕರ್ಯಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮಸ್ಥರು ಸಭೆ ನಡೆಸಿ ಮತದಾನ ಬಹಿಷ್ಕಾರ ಹಾಕುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ.
ತಾಲ್ಲೂಕಿನ ಏಳೆಂಟು ಗ್ರಾಮಗಳು ಈಗಾಗಲೇ ಚುನಾವಣೆ ಬಹಿಷ್ಕಾರ ಹಾಕಿದ್ದು, ಅಧಿಕಾರಿಗಳ ವರ್ಗ ಅಲ್ಲಿಗೆ ಭೇಟಿ ನೀಡಿ ಮನವೊಲಿಸುವ ಕೆಲಸ ಮಾಡಿದ್ದರೂ ಗ್ರಾಮಸ್ಥರು ಅದಕ್ಕೆ ಜಗ್ಗದೆ ಮತದಾನ ಬಹಿಷ್ಕಾರದ ನಿರ್ಣಯವನ್ನು ಅಚಲಗೊಳಿಸಿದ್ದಾರೆ.
ತಾಲ್ಲೂಕಿನ ಸಂಸೆಕೈ, ತೌಡುಗೊಳಿ ಗ್ರಾಮಸ್ಥರು ತಮ್ಮ ಊರಿನ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಹಾಕಿದ ಮೊದಲ ಗ್ರಾಮವಾಗಿದೆ. ನಂತರ ವಾರಂಬಳ್ಳಿ ಗ್ರಾಮದಲ್ಲಿ ದೂರ ಸಂಪರ್ಕ ಇಲ್ಲವೆಂದು ಆರೋಪಿಸಿದ ಗ್ರಾಮಸ್ಥರು ಮತದಾನ ಮಾಡುವುದಿಲ್ಲ ಎಂದು ನಿರ್ಣಯ ಕೈಗೊಂಡರು.
ಯಡೂರು ಬಳಿಯ ಮಾಗಲು ಗ್ರಾಮಸ್ಥರು ಕೂಡ ರಸ್ತೆ ಸರಿ ಇಲ್ಲ ಎಂದು ಬಹಿಷ್ಕಾರದ ಕೂಗು ಎಬ್ಬಿಸಿದ್ದಾರೆ. ಇನ್ನು ಕುಂಬತ್ತಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಖಂಡಿಸಿ ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಬಿಲಗೋಡಿ, ಈಚಲಕೊಪ್ಪ, ಕಾಪೇರಮನೆ ಗ್ರಾಮಸ್ಥರು ಕೂಡ ‘ನಮ್ಮೂರಿಗೆ ಮತ ಕೇಳಲು ಬರಬೇಡಿ’ ಎಂದು ಒಕ್ಕೊರಲ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.