Breaking News
Home / Uncategorized / ಪ್ರಿಯ ಸಹೋದರಿ..ನಿನ್ನ ನಡೆ ದೃಢವಾಗಿರಲಿ-ನುಡಿ ಸ್ಪಷ್ಟವಾಗಿರಲಿ

ಪ್ರಿಯ ಸಹೋದರಿ..ನಿನ್ನ ನಡೆ ದೃಢವಾಗಿರಲಿ-ನುಡಿ ಸ್ಪಷ್ಟವಾಗಿರಲಿ

Spread the love

ಮಹಿಳೆಯ ಸ್ಥಿತಿಗತಿಯಲ್ಲಿ ಸುಧಾರಣೆಯಾಗಬೇಕಾದರೆ ಬದಲಾಗಬೇಕಾಗಿರುವುದು ತಲೆತಲಾಂತರಗಳಿಂದಲೂ ನಡೆದುಬಂದಿರುವಂತಹ ಆಚಾರ- ವಿಚಾರಗಳಲ್ಲಿ. ಇದನ್ನು ಬದಲಾವಣೆ ಮಾಡಬೇಕಾದರೆ ಬಹುಶಃ ಅದರಲ್ಲಿ ಮಹಿಳೆಯ ಪಾತ್ರವೇ ಹೆಚ್ಚಿರುತ್ತದೆ. ತಮ್ಮ ಮಕ್ಕಳಲ್ಲಿ ಉತ್ತಮ ಆಚಾರ-ವಿಚಾರಗಳನ್ನು ಮೈಗೂಡಿಸುವ ಕೆಲಸ ಮಹಿಳೆಯರೇ ನಿರ್ವಹಿಸುತ್ತಾರೆ ಮತ್ತು ಅದರಲ್ಲಿ ಅವರೇ ಹೆಚ್ಚು ಸಮರ್ಥರು ಎಂದಾದ ಮೇಲೆ ಬದಲಾವಣೆಯ ಹರಿಕಾರರೂ ಅವರೇ ಆಗಬಲ್ಲರು.

ಮಹಿಳಾ ಸಮಾನತೆ, ಮಹಿಳಾ ವಾದ, ಮಹಿಳಾ ಸಶಕ್ತೀಕರಣ ಎಂಬ ಚರ್ಚೆಗಳು ಇಂದು ನಿನ್ನೆಯದಲ್ಲ. ಗೌತಮ ಬುದ್ಧ, ಬಸವಣ್ಣನವರ ಕಾಲದಿಂದಲೂ ಈ ಕುರಿತಾದ ವೈಚಾರಿಕ ಹೊಳವುಗಳು ಕಂಡಬಂದರೂ 1821ರ ಹೊತ್ತಿಗೆ ಸಮಾಜ ಸುಧಾರಕ ರಾಜಾರಾಮ್‌ ಮೋಹನ್‌ ರಾಯ್‌, 1848ರಲ್ಲಿ ಜ್ಯೋತಿ ಭಾ ಪುಲೆ, ಈಶ್ವರಚಂದ್ರ ವಿದ್ಯಾಸಾಗರ್‌, 1913ರ ಸುಮಾರಿಗೆ ಮಹಾತ್ಮಾ ಗಾಂಧೀಜಿ ಅವರು ಭಾರತದಲ್ಲಿ ಮಹಿಳೆಯರ ಆಸ್ಮಿತೆಯ ಕುರಿತಂತೆ ಬಹಳ ಗಹನವಾದ, ವಿಚಾರಪೂರ್ಣವಾದ ಚಿಂತನೆಗಳನ್ನು ಪತ್ರಿಕೆಗಳ ಮೂಲಕ ಹರಿಯಬಿಟ್ಟಿದ್ದಾರೆ. ರಾಜಾರಾಮ್‌ ಮೋಹನ್‌ ರಾಯ್‌ ಅವರು ಸುಮಾರು 1821ರ ಹೊತ್ತಿಗೇ ಮಹಿಳಾ ಹಕ್ಕುಗಳ ಕುರಿತಾದ ವಿಚಾರಗಳನ್ನು ಪ್ರಸ್ತಾವಿಸಿದ್ದಾರೆ ಎಂದರೆ ಈ ಚರ್ಚೆ ಸಾರ್ವಜನಿಕ ವೇದಿಕೆಗೆ ಬಂದು ಸುಮಾರು ಇನ್ನೂರು ವರ್ಷಗಳಷ್ಟು ಹಳೆಯದೇ ಆಯಿತು. ವಿಪರ್ಯಾಸ ಎಂದರೆ ಇಂದಿಗೂ ಮಹಿಳೆಯರ ಹಕ್ಕುಗಳು, ಸಾಮರ್ಥ್ಯ ಮತ್ತು ಸಶಕ್ತೀಕರಣದ ಕುರಿತಾಗಿ ಮಾತನಾಡುತ್ತಿದ್ದೇವೆ!. ಇನ್ನೂರು ವರ್ಷಗಳು ಕಳೆದರೂ ಸಮಸ್ಯೆ ಒಂದಲ್ಲ ಒಂದು ರೂಪದಲ್ಲಿ ಚರ್ವಿತ ಚರ್ವಣವಾಗಿ ಮುಂದೆ ನಿಲ್ಲುತ್ತಿದೆ.

ಮಹಿಳಾವಾದ ಎಂದರೆ ಅದು ಪುರುಷರ ವಿರುದ್ಧದ ವಾದವಲ್ಲ ಅಥವಾ ಪುರುಷರನ್ನ ದುರ್ಬಲನನ್ನಾಗಿಸುವ ಹುನ್ನಾರವೂ ಅಲ್ಲ ಅಥವಾ ಮಹಿಳಾವಾದ ಎಂದರೆ ಶೇ.50ರ ಲೆಕ್ಕಾಚಾರವಲ್ಲ. ಮಹಿಳಾವಾದವೆಂದರೆ ಅನಾದಿಕಾಲದಿಂದಲೂ ಸೃಷ್ಟಿಯ ಭಾಗವಾಗಿಯೇ ಇದ್ದ ಆದರೆ ಹಲವಾರು ಉದ್ದೇಶ-ದುರುದ್ದೇಶಗಳಿಂದ ತನ್ನ ಸಾಮರ್ಥ್ಯಕ್ಕೆ, ಅಭಿಪ್ರಾಯಗಳಿಗೆ ಬೆಲೆ ಸಿಗದೆ ಮೂಲೆಗುಂಪಾದ ಪೃಕೃತಿಯ ಸೃಷ್ಟಿಯೊಂದರ ಪರವಾಗಿ ವ್ಯಕ್ತವಾಗುವ ಧ್ವನಿ.ಅದು ಮಾನವ ಜೀವಿಯೊಂದಕ್ಕೆ ಸ್ವಾಭಾವಿಕವಾಗಿ ಸಿಗಬೇಕಾದ ಗೌರವವನ್ನು ಬೇಡುತ್ತದೆ. ಆದ ಕಾರಣ ಅದು ಮಾನವತಾವಾದ. ಹೆಣ್ಣು ಅನಿಸಿಕೊಂಡ ಕಾರಣಕ್ಕೆ ಪ್ರತೀ ಹೆಜ್ಜೆಯಲ್ಲೂ ಸಂಘರ್ಷ ಮಾಡುವ ಅನಿವಾರ್ಯತೆ ಇಲ್ಲದೆ ಸ್ವಾಭಾವಿಕವಾಗಿ ತನ್ನ ಅಸ್ತಿತ್ವವನ್ನು ಸ್ಪಷ್ಟಪಡಿಸಿಕೊಳ್ಳುವ ಪ್ರಕ್ರಿಯೆ. ವ್ಯಕ್ತಿಯೊಬ್ಬನಿಗೆ ಇರಬೇಕಾದ ಅಥವಾ ಕೊಡಲೇಬೇಕಾದ ಸ್ಪೇಸ್‌ ಅನ್ನು ದಕ್ಕಿಸಿಕೊಳ್ಳುವ ಪ್ರಯತ್ನ. ಸೃಷ್ಟಿಯಲ್ಲಿ, ಜೀವನ ಚಕ್ರದಲ್ಲಿ ಗಂಡು ಹೆಣ್ಣುಗಳು ಇಬ್ಬರೂ ಸಮಭಾಗಿಗಳು ಎಂದ ಮೇಲೆ, ಸಮಾನ ಗೌರವಕ್ಕೆ, ಸಮಾನ ಅವಕಾಶಕ್ಕೆ ಇಬ್ಬರೂ ಭಾಜನರು ತಾನೆ?.

ಅನಾದಿಕಾಲದಲ್ಲಿ ದೈಹಿಕ ಸಾಮರ್ಥ್ಯದ ಆಧಾರದಲ್ಲಿ ಪುರುಷರನ್ನೇ ಕುಟುಂಬವೊಂದರಲ್ಲಿ ಸಶಕ್ತ ಎಂದು ಪರಿಗಣಿಸಲಾಗಿತ್ತು. ಜೀವನ ನಡೆ ಸಲು ಅಗತ್ಯವಾಗಿದ್ದ ಮಾನಸಿಕ ಸಾಮರ್ಥ್ಯ, ಮಮತೆ, ತಾಳ್ಮೆ, ಕರುಣೆ ಕಣ್ಣಿಗೆ ಕಾಣದೇ ಹೋಯಿತು. ಬಹುಶಃ ಮಹಿಳೆಯರಿಗಿದ್ದ ಈ ಅಗಾಧ ಶಕ್ತಿಯನ್ನು ಮೊದಲ ಬಾರಿ ಗುರುತಿ ಸಿದವರು ಮಹಾತ್ಮಾ ಗಾಂಧೀಜಿ. ತಮ್ಮ ಚಿಂತನೆ ಯೊಂದರಲ್ಲಿ ಗಾಂಧೀಜಿಯವರು; ಮಮತೆ, ದಯೆ, ಕರುಣೆಯ ಮೂಲವಾದ ಅಹಿಂಸೆ ನಮ್ಮ ನಾಡಿನ ಮೂಲ ಧ್ಯೇಯವಾದರೆ ಭಾರತದ ಭವಿಷ್ಯದ ಶಕ್ತಿ ಮಹಿಳೆಯರಲ್ಲಿದೆ ಎನ್ನುತ್ತಾರೆ.

ಸಶಕ್ತೆಯಾಗುವುದೆಂದರೆ ಪುರುಷನಂತೆ ಆಗುವುದಲ್ಲ
ಮಹಿಳೆ ಪುರುಷರಂತೆ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿದ್ದಾಳೆೆ, ಅವಳು ಮನೆಯ ಗಂಡುಮಗು ವಿನಂತೆ ಎನ್ನುವ ಮಾತನ್ನು ಆಗಾಗ್ಗೆ ಕೇಳುತ್ತಿ ದ್ದೇವೆ. ಆದರೆ ಪ್ರಶ್ನೆಯಿರುವುದು ಮಹಿಳೆ ಸಶಕ್ತೆಯಾ ಗುವುದೆಂದರೆ ಪುರುಷರಂತೆ ಆಗುವುದಲ್ಲ. ಪ್ರತೀ ಮಹಿಳೆಯೂ ಪ್ರಕೃತಿಯ ಸುಂದರ ಸೃಷ್ಟಿ. ಮೇಲೆ ಹೇಳಿದ ಅಗಾಧ ಸಾಮರ್ಥ್ಯ ಅವಳ ಲ್ಲಿದೆ ಎಂದ ಮೇಲೆ, ಅವಳಿಗೆ ಪುರುಷರಂತೆ ಆಗಬೇಕಾದ ಅನಿವಾರ್ಯತೆಯೇನೂ ಇಲ್ಲ. ಸಶಕ್ತೀಕರಣ ಎಂದರೆ ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಹಾಗೂ ದೃಢವಾಗಿ ಮಂಡಿಸುವುದು, ನಡೆ- ನುಡಿಯಲ್ಲಿ ಘನತೆ, ಗಾಂಭೀರ್ಯವನ್ನು ಮೈಗೂಡಿ ಸಿಕೊಳ್ಳುತ್ತಾ ದಿಟ್ಟವಾಗಿರುವುದು. ತನ್ನ ಜೀವನ, ಮನೆಯ ನಿರ್ವಹಣೆ ಅಥವಾ ಔದ್ಯೋಗಿಕ ಕ್ಷೇತ್ರದಲ್ಲಿ ಸ್ವಯಂ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಳ್ಳುವುದು. ತನ್ನ ಇಚ್ಛೆಗೆ ಅನುಸಾರ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದು. ದೈಹಿಕವಾಗಿ ಹೆಣ್ಣು ಕೋಮಲೆ ಎಂದರೆ ಜೀವನದಲ್ಲಿ ನಡೆಯುವ ಸೂಕ್ಷ್ಮ ವಿಷಯಗಳನ್ನೂ ಮಾನವಿಕ ನೆಲೆಯಲ್ಲಿ ಪರಿಗಣಿಸುವುದು ಹಾಗೂ ಅದಕ್ಕೊಂದು ನಾಜೂಕು ಪರಿಹಾರವನ್ನು ಕಂಡುಕೊಳ್ಳುವುದು.

ಶಿಕ್ಷಣ- ಉದ್ಯೋಗ ಸಿಕ್ಕ ಮಾತ್ರಕ್ಕೆ ಸಶಕ್ತೀಕರಣವಾಗದು
ಮಹಿಳೆ ಶಿಕ್ಷಣ ಪಡೆದರೆ ಸಮರ್ಥಳಾಗುತ್ತಾಳೆ, ತನ್ನ ವಿರುದ್ಧ ನಡೆಯುವ ಅನ್ಯಾಯದ ವಿರುದ್ಧ ದನಿಯೆತ್ತುವ ಧೈರ್ಯ-ಸ್ಥೈರ್ಯ ಅವಳಲ್ಲಿ ರುತ್ತದೆ ಎಂಬುದು ನಿಜವಾದರೂ ಕೆಲವು ವಾಸ್ತವಗಳು ವ್ಯತಿರಿಕ್ತ ವಿಚಾರಗಳನ್ನು ತಿಳಿಸುತ್ತಿವೆ. ಸಮಿಕ್ಷೆಯೊಂದರ ಪ್ರಕಾರ ಶೇ. 80ರಷ್ಟು ಉನ್ನತ ಶಿಕ್ಷಣ ಪಡೆದ ಹುಡುಗಿಯರು ಉದ್ಯೋಗಕ್ಕೆ ಸೇರುತ್ತಿಲ್ಲ, ಶಿಕ್ಷಣ ಕೇವಲ ವಿವಾಹದ ಅರ್ಹತೆ ಯಾಗಿಯೇ ಗುರುತಿಸಿಕೊಂಡಿದೆ. ಉಳಿದಂತೆ ಉದ್ಯೋಗ ಗಳಿಸಿದ ಸುಮಾರು ಶೇ.40ರಷ್ಟು ಮಹಿಳೆಯರು ಕೆಲಸ ದಕ್ಕಿದ ಒಂದೆರಡು ವರ್ಷಗಳಲ್ಲಿ ಕೆಲಸ ಬಿಡುತ್ತಿದ್ದಾರೆ. ಇಷ್ಟಕ್ಕೂ ಉದ್ಯೋಗ ದಕ್ಕಿದ ಕೂಡಲೇ ಸಶಕ್ತಳಾದಳೇ ಎಂದರೆ ಅಲ್ಲಿ ಎದುರಾಗುವ ಸಮಸ್ಯೆಗಳು ಪ್ರಬಲ- ದುರ್ಬಲ ಸಂಘರ್ಷದ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ. ತನ್ನ ಅಭಿಪ್ರಾ ಯಗಳಿಗೆ ಮನ್ನಣೆ ಸಿಗದೇ ಇರುವುದು. ನಿಯತ್ತಾಗಿ ಕೆಲಸ ಮಾಡುತ್ತಾರೆ ಎನ್ನುವ ಹೊಗಳಿಕೆಯೊಂದಿಗೆ ಅತಿಯಾದ ಕೆಲಸದ ಒತ್ತಡ. ಕಡತಗಳ ನಿರ್ವಹಣೆ ಜವಾಬ್ದಾರಿ ಆಕೆಗೆ ಒಪ್ಪಿಸಿ ಆಕೆಯ ಸೃಜನಶೀಲತೆಯನ್ನು ಇಲ್ಲವಾಗಿಸುವ ಪ್ರಯತ್ನ. ಪ್ರಮುಖ ನಿರ್ಧಾರಗಳಲ್ಲಿ ಆಕೆಯ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಅಥವಾ ಅದಕ್ಕೆ ಅವಕಾಶ ನೀಡದೇ ಇರುವುದು. ಆದ ಕಾರಣ ಶಿಕ್ಷಣ- ಉದ್ಯೋಗ ಸಿಕ್ಕಿದ ತತ್‌ಕ್ಷಣ ಪರಿಸ್ಥಿತಿ ಬದಲಾಗು ತ್ತದೆ ಎನ್ನುವ ವಿಚಾರವನ್ನು ಪೂರ್ತಿಯಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ವಾಸ್ತವವಾಗಿ ಬಹಳಷ್ಟು ಕುಟುಂಬಗಳಲ್ಲಿ ಮಹಿಳೆಯರೇ ಪುರುಷ ಪ್ರಧಾನ ವ್ಯವಸ್ಥೆಯ ರಾಯಭಾರಿಗಳಾಗಿರುವುದು ಕಂಡುಬರುತ್ತದೆ. ತಮ್ಮ ಮನೆಯ ಮಗಳ್ಳೋ ಅಥವಾ ಸೊಸೆಯೋ ನೇರವಾಗಿ ದಿಟ್ಟವಾಗಿ ಮಾತನಾಡುವುದನ್ನು ತಾಯಂದಿರೇ ವಿರೋಧಿಸುತ್ತಾರೆ. ಅಥವಾ ಯಾವುದೋ ಮನೆಯಲ್ಲಿ ಗಂಡನೊಬ್ಬ ತನ್ನ ಹೆಂಡತಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾನೆ ಎಂದರೆ ಅದನ್ನು ನಗೆಪಾಟಲು ಮಾಡುವುದರಲ್ಲಿ ಮಹಿಳೆಯರೇ ಮೊದಲಿಗರಾ ಗುತ್ತಾರೆ. ಇನ್ನೊಬ್ಬರ ದುಃಖಕ್ಕೆ ಕರಗುವುದನ್ನು, ತನ್ನ ಭಾವನೆಗಳನ್ನು ಸಹಜವಾಗಿ ಹೊರಹಾಕುವುದನ್ನು ಹೇಳಿಕೊಟ್ಟಾಗ ಮಾತ್ರ ಇನ್ನೊಂದು ಜೀವಿಯ, ಮುಖ್ಯವಾಗಿ ಹೆಣ್ಣು ಮಕ್ಕಳ ಕಷ್ಟಗಳನ್ನು, ಭಾವನೆ ಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
ಆಧುನಿಕ ಯುಗದಲ್ಲಿ ದೈಹಿಕ ಸಾಮರ್ಥ್ಯ ಕ್ಕಿಂತಲೂ ಬೌದ್ಧಿಕ ಸಾಮರ್ಥ್ಯ, ಯಾವುದೇ ಸಂದ
ರ್ಭದಲ್ಲಿಯೂ ಅಚಲರಾಗಿ ನಿಲ್ಲುವುದು, ತಾಳ್ಮೆ, ಸಂಯಮ ಎಂಬ ಸಾಫ್ಟ್ಸ್ಕಿಲ್‌ಗೆ ಹೆಚ್ಚಿನ ಮಹತ್ವ. ಈ ಎಲ್ಲ ಅಂಶಗಳು ಮಹಿಳೆಯರಲ್ಲಿ ಸ್ವಾಭಾವಿಕವಾಗಿಯೇ ಇವೆ ಎಂದಾದ ಮೇಲೆ ದೈಹಿಕ ಸಾಮರ್ಥದ ಆಧಾರದಲ್ಲಿ ನಡೆಸುವ ಪ್ರಬಲ-
ದುರ್ಬಲ ಎಂಬ ವರ್ಗೀಕರಣಕ್ಕೆ ಹುರುಳಿಲ್ಲ ಎಂದಾಯಿತು. ಜೀವಜಗತ್ತಿನ ಸೃಷ್ಟಿ ಅತ್ಯಂತ ಸುಂದರ. ಅದು ಬಹಳ ವೈಜ್ಞಾನಿಕ ಆದರೆ ಊಹೆಗೆ ನಿಲುಕದ್ದು. ಬಹಳ ವೈಚಿತ್ರ ಪೂರ್ಣವಾದುದು ಆದರೆ ತಾರ್ಕಿಕ ಅರ್ಥವಿರು ವಂತದ್ದು. ಪುರುಷ-
ಮಹಿಳೆ ಎಂಬ ಸೃಷ್ಟಿ ಈ ಜಗತ್ತಿನಲ್ಲಿ ಇದೆ ಎಂದರೆ ಅದಕ್ಕೊಂದು ಉದ್ದೇಶವಿದೆ. ಎರಡು ಲಿಂಗಗಳ ದೇಹ ಪ್ರಕೃತಿಯಲ್ಲಿ, ಶಕ್ತಿ ಸಾಮರ್ಥ್ಯದಲ್ಲಿ ಭಿನ್ನತೆ ಇದೆ ಎಂದರೆ ಅದಕ್ಕೆ ತರ್ಕಬದ್ದವಾದ ಕಾರಣಗಳಿವೆ. ಸಮಪಾಲು-ಸಮಬಾಳು ಎಂಬ ಧ್ಯೇಯದೊಂದಿಗೆ ನಡೆಯುವುದರಲ್ಲಿ ಬುದ್ಧಿವಂತಿಕೆಯಿದೆ.

– ಗೀತಾವಸಂತ್‌ ಇಜಿಮಾನ್‌, ಉಜಿರೆ


Spread the love

About Laxminews 24x7

Check Also

ಮಳೆ.. ಮಳೆ.. ಆರ್‌ಸಿಬಿ VS ಚೆನ್ನೈ ಮ್ಯಾಚ್ ರದ್ದು?

Spread the love ಮಳೆ.. ಮಳೆ.. ಎಲ್ಲೆಲ್ಲೂ ಮಳೆಯ ಅಬ್ಬರ ಶುರುವಾಗಿದೆ. ಅದರಲ್ಲೂ ಬೆಂಗಳೂರು & ಚೆನ್ನೈ ನಡುವೆ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ