ಬಾಗಲಕೋಟೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಎರಡು ದಿನಗಳ ರಾಜ್ಯಕ್ಕೆ ಭೇಟಿ ನೀಡಿದ ಎರಡನೇ ದಿನವಾದ (ಇಂದು) ಭಾನುವಾರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜವಹರಲಾಲ್ ನೆಹರು ವೈದ್ಯಕೀಯ ಕಾಲೇಜು (ಜೆಎನ್ ಎಂಸಿ) ಮೈದಾನದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕರಕಲ್ಮಟ್ಟಿ ಗ್ರಾಮದಲ್ಲಿರುವ ಕೇದಾರನಾಥ ಶುಗರ್ ಅಂಡ್ ಅಗ್ರೋ ಪ್ರಾಡಕ್ಟ್ಸ್ ಲಿಮಿಟೆಡ್ ನ ಎಥೆನಾಲ್ ಯೋಜನೆಗೆ ಅಮಿತ್ ಶಾ ಅವರು ಇಂಧು ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12.45ಕ್ಕೆ ಜಿಲ್ಲೆಯಲ್ಲಿ ಕೆಎಲ್ ಇ ಆಸ್ಪತ್ರೆಯ ಅತ್ಯಾಧುನಿಕ ಸಿಮ್ಯುಲೇಶನ್ ಕೇಂದ್ರವನ್ನು ಗೃಹ ಸಚಿವರು ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 2.30ಕ್ಕೆ ಬೆಳಗಾವಿಯ ಜೆಎನ್ ಎಂಸಿ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ತಮ್ಮ ಪ್ರವಾಸದ ಮೊದಲ ದಿನದಲ್ಲಿ ಕೇಂದ್ರ ಸಚಿವರು ಕರ್ನಾಟಕದ ಶಿವಮೊಗ್ಗದಲ್ಲಿ ಭದ್ರಾವತಿ ಕ್ಷಿಪ್ರ ಕಾರ್ಯಪಡೆ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಗೃಹ ಸಚಿವರು ತಮ್ಮ ಭಾಷಣದಲ್ಲಿ, ದೇಶದಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಆರ್ ಎಎಫ್ ನ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ರಾಪಿಡ್ ಆಕ್ಷನ್ ಫೋರ್ಸ್ ಸಿಆರ್ ಪಿಎಫ್ ನ ವಿಶೇಷ ಪಡೆಯಾಗಿದ್ದು, ಗಲಭೆಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸನ್ನಿವೇಶಗಳನ್ನು ನಿಭಾಯಿಸುತ್ತದೆ.